- ಬೆಳಗಾವಿಯಲ್ಲಿ ಮಾಸಿ ಸಿಎಂ ಪರ ಅಭಿಮಾನಿಗಳ ಘೋಷಣೆ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಯಡಿಯೂರಪ್ಪ ಪದತ್ಯಾಗ ಬಳಿಕ ಹೊಸ ಸಿಎಂ ಆಯ್ಕೆಗೆ ಬಿಜೆಪಿಯಲ್ಲಿ ಕಸರತ್ತು ನಡೆಯುತ್ತಿದ್ದರೆ ಇತ್ತ ಬೆಳಗಾವಿಯಲ್ಲಿ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಘೋಷಣೆಗಳು ಮೊಳಗಿದವು. ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸಕ್ಕೆಂದು ಬೆಳಗಾವಿಗೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.
ನಗರದ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಮನವಿ ಕೊಟ್ಟು ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಕೆಲ ಹೊತ್ತು ಸಾರ್ವಜನಿಕರ ಕುಂದುಕೊರತೆ ಆಲಿಸಿದ ಸಿದ್ದರಾಮಯ್ಯ, ಬಳಿಕ ಖಾನಾಪುರ, ಬೆಳಗಾವಿ ಗ್ರಾಮೀಣ, ಸೇರಿದಂತೆ ಸಂಕೇಶ್ವರ ತಾಲೂಕಿನಗಳಲ್ಲಿ ಸಂಭವಿಸಿದ ನೆರೆ ಹಾನಿ ಪರಿಶೀಲನೆಗೆ ತೆರಳಿದರು.
ಈ ವೇಳೆ ಪ್ರವಾಸಿ ಮಂದಿರದಿಂದ ಹೊರಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಈ ವೇಳೆ ಸಿದ್ದರಾಮಯ್ಯ ಕೂಡ ಅಭಿಮಾನಿಗಳಿಗೆ ಏನೂ ಸೂಚನೆ ಕೊಡದೇ ಕಾರಿನಲ್ಲಿ ಕುಳಿತು ಖಾನಾಪುರಕ್ಕೆ ತೆರಳಿದರು.