ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಅವ್ವ ಸೇವಾ ಪ್ರತಿಷ್ಠಾನ ಹಾಗೂ ಶಿಕ್ಷಕ ಹನುಮರಡ್ಡಿ ಅವರ ನೆರವಿನೊಂದಿಗೆ ಮಕ್ಕಳ ಕಲಿಕೆಗಾಗಿ ನಲಿ-ಕಲಿ ಕೊಠಡಿಗೆ ಫ್ಲೆಕ್ಸ್ ಅಳವಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಮಂಜುನಾಥ ಮಟ್ಟಿ ಮಾತನಾಡಿ, ಸಮಾಜ ನಮಗೆ ಎಲ್ಲವನ್ನೂ ನೀಡಿದೆ. ಇಂದು ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂಬ ಉದ್ದೇಶದಿಂದ ಹನುಮರಡ್ಡಿ ಶಿಕ್ಷಕರು ತಳಕಲ್ಲ ಕ್ಲಸ್ಟರ್ ಮಟ್ಟದ ಪ್ರತಿಯೊಂದು ಶಾಲೆಯ ನಲಿ-ಕಲಿ ಕೊಠಡಿಗೆ ಫ್ಲೆಕ್ಸ್ ನೀಡುವ ಮೂಲಕ ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ. ಮಕ್ಕಳು ಶಿಕ್ಷಣವಂತರಾಗಬೇಕು, ನಾಡಿನ ಉತ್ತಮ ಪ್ರಜೆಗಳಾಗಬೇಕು ಎಂದು ಸರಕಾರ ಸಾಕಷ್ಟು ಸಹಕಾರ ನೀಡುತ್ತಿದ್ದು, ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು ಎಂದರು.
ಶಿಕ್ಷಕ ಹನುಮರಡ್ಡಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕ ವೃಂದ ಇರುವುದರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಶಿಕ್ಷಕರು ಮಕ್ಕಳಿಗಾಗಿ ಹಗಲಿರುಳು ಶ್ರಮಿಸುತ್ತಾರೆ, ಅವರಿಗೆ ಸಹಾಯ ಸಹಕಾರ ನೀಡಿದಲ್ಲಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಂ. ಎಂ ಮೇಗಲಮನಿ, ಕೆ.ಎಂ. ಹೆರಕಲ್ಲ, ಮಂಜುನಾಥ ಕಲ್ಯಾಣಮಠ, ಪ್ರಭು ಕಲಿಗಾರ, ಸಂತೋಷ ಬಾತಾಖಾನಿ, ಜಿ.ಎಂ. ಗಾಡಿ, ಐ.ಐ. ಮುಜಾವಾರ, ಮಂಜುನಾಥ ಗುಲಗಂಜಿ, ಮಾಹಂತೇಶ ನಪೂರಿಮಠ, ಅಶೋಕ ಗಡಾದ ಸೇರಿದಂತೆ ಶಾಲಾ ಶಿಕ್ಷಕರು ಇದ್ದರು.


