ವಿಜಯಪುರ: ಕಳೆದ ಎರಡು ತಿಂಗಳಲ್ಲಿ ಸರಣಿ ಭೂಕಂಪನಗಳಿಂದ ಆತಂಕಕ್ಕೆ ಒಳಗಾದ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದ ಅನುಭವವಾಗಿದೆ.
ಇಂದು ಬೆಳಿಗ್ಗೆ 7.45ರ ಸುಮಾರಿಗೆ ಭಾರೀ ಸ್ಫೋಟದ ಸದ್ದಿನೊಂದಿಗೆ ಸಂಭವಿಸಿದ ಭೂಕಂಪನದಿಂದ ವಿಜಯಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರಲ್ಲಿ ಭೀತಿ ನಿರ್ಮಾಣವಾಯಿತು.
ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಈ ಭೂಕಂಪನವು ವಿಜಯಪುರ ನಗರ ಹೊರತಾಗಿ ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ, ಹೊನ್ನೂಟಗಿ ಸೇರಿದಂತೆ ತಿಕೋಟ ಹಾಗೂ ವಿಜಯಪುರ ತಾಲೂಕುಗಳಲ್ಲಿಯೂ ತೀವ್ರವಾಗಿ ಅನುಭವಕ್ಕೆ ಬಂದಿದೆ. ಭೂಮಿ ನಡುಗುತ್ತಿದ್ದಂತೆಯೇ ಜನರು ಮನೆಗಳಿಂದ ಹೊರಗೆ ಓಡಿಬಂದ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಆಪ್ಗಳು ದೃಢೀಕರಿಸಿದ ಕಂಪನ:-
‘Earthquake Network’ ಮತ್ತು ‘QuakeFeed’ ಭೂಕಂಪನ ಆಪ್ಗಳಲ್ಲಿ ಸಹ 3.1 ರಿಕ್ಟರ್ ತೀವ್ರತೆಯ ಕಂಪನ ದಾಖಲಾಗಿದ್ದು, ತಕ್ಷಣವೇ ತುರ್ತು ಎಚ್ಚರಿಕಾ ಸಂದೇಶಗಳು ಬಳಕೆದಾರರಿಗೆ ತಲುಪಿವೆ.
ಸರಣಿ ಭೂಕಂಪಗಳಿಂದ ಆತಂಕದಲ್ಲಿ ವಿಜಯಪುರ:-
ಅಕ್ಟೋಬರ್ನಿಂದಲೇ ವಿಜಯಪುರ ಜಿಲ್ಲೆಯಲ್ಲಿ ಪದೇಪದೇ ಭೂಮಿ ಕಂಪಿಸುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ಇದು 13ನೇ ಬಾರಿ ಕಂಪನವಾಗಿದೆ. ಈ ಸರಣಿ ಭೂಕಂಪನಗಳಿಂದ ಜಿಲ್ಲೆಯ ಜನತೆ ಆತಂಕದಲ್ಲಿದ್ದು, ಮುಂದಿನ ದಿನಗಳಲ್ಲಿ ತೀವ್ರತೆ ಹೆಚ್ಚಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಭೂವಿಜ್ಞಾನ ಇಲಾಖೆ ಭೂಕಂಪನದ ನಿಖರ ಕೇಂದ್ರಬಿಂದು ಮತ್ತು ಕಾರಣ ಕುರಿತು ತನಿಖೆ ನಡೆಸುತ್ತಿದೆ.



