ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಈ ಸಂದರ್ಭದಲ್ಲಿ ಎಸ್.ಆರ್. ಪಾಟೀಲ ಮಾತನಾಡಿ, ಜಿಲ್ಲೆಯ ಯುವನಿಧಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಾಗಿ ಈ ಯೋಜನೆಯ ಪ್ರಗತಿಯು ತೀರಾ ಕುಂಠಿತವಾಗಿದ್ದು, ಈ ಕೂಡಲೇ ಯೋಜನೆಯ ಬಗ್ಗೆ ತಾಲೂಕಗಳಲ್ಲಿ, ಗ್ರಾಮಗಳಲ್ಲಿ ಹಾಗೂ ನಗರದಲ್ಲಿ ಇರುವ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿ ತಿಂಗಳ ಕನಿಷ್ಠ 10 ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಯೋಜನೆಯ ಹೆಚ್ಚಿನ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡು ಯುವನಿಧಿ ಯೋಜನೆಯ ಪ್ರಗತಿ ಸಾಧಿಸಲು ಸಭೆಯಲ್ಲಿ ಸೂಚಿಸಿದರು.
ಗೃಹಲಕ್ಷಿಮಾ ಯೋಜನೆಯಲ್ಲಿ ಈಗಾಗಲೇ ಒಟ್ಟು 4,04,848 ಫಲಾನುಭವಿಗಳಿದ್ದು, 3,95,336 ನೋಂದಣಿಯಾಗಿವೆ. ಪ್ರತಿ ಫಲಾನುಭವಿಗಳಿಗೆ 2 ಸಾವಿರ ರೂ.ಗಳಂತೆ ಒಟ್ಟು 1,584 ಕೋಟಿ 89 ಲಕ್ಷ 56 ಸಾವಿರ ರೂ ಜಮೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ. 97.65ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಅರ್ಜಿಗಳನ್ನು ಪರಿಶೀಲಿಸಿ ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಎಸ್.ಅಕ್ಕಿ, ಸುಧೀರ ಎಸ್.ಬೋಳಾರ, ರೇಹನ್ ರಝಾ ಐನಾಪುರಿ ಹಾಗೂ ರತ್ನಾ ತೇಗೂರಮಠ ಉಪಸ್ಥಿತರಿದ್ದರು.
ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊಗಲಬಾಗಿ ಸ್ವಾಗತಿಸಿದರು. ಸಭೆಯಲ್ಲಿ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸದಸ್ಯರಾದ ಅರವಿಂದ ಏಗನಗೌಡರ ಮಾತನಾಡಿ, ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಕಾಲೇಜು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ದೂರುಗಳು ಬಂದಿವೆ. ಯುವನಿಧಿ ಯೋಜನೆಯ ಬಗ್ಗೆ ನಗರ, ಪಟ್ಟಣ ಹಾಗೂ ಗ್ರಾಮದಲ್ಲಿರುವ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಪ್ರತಿ ತಿಂಗಳ ಕನಿಷ್ಠ 5 ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಸಭೆಯಲ್ಲಿ ತಿಳಿಸಿದರು.


