ಬೆಂಗಳೂರು:- ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಎಸಿ ಸ್ಲೀಪರ್ ಬಸ್ ಅಕ್ಟೋಬರ್ 24ರಂದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರಂತದಲ್ಲಿ 19 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದರು.
ಈ ಘಟನೆ ಬಳಿಕ ಸಾರಿಗೆ ಸಚಿವರು ಖಾಸಗಿ ಬಸ್ಸುಗಳ ಸುರಕ್ಷತಾ ಕ್ರಮಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಅವರ ಆದೇಶದ ಮೇರೆಗೆ, ಸಾರಿಗೆ ಇಲಾಖೆ ದೊಡ್ಡ ಮಟ್ಟದ ತಪಾಸಣೆ ಆರಂಭಿಸಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉಪ ಸಾರಿಗೆ ಆಯುಕ್ತರ ನೇತೃತ್ವದಲ್ಲಿ 12 ತಂಡಗಳನ್ನು ರಚಿಸಿ ಬಸ್ಸುಗಳ ಪರಿಶೀಲನೆ ನಡೆಯಿತು. ಬಸ್ಗಳಲ್ಲಿ ತುರ್ತು ನಿರ್ಗಮನ ಬಾಗಿಲು, ಬೆಂಕಿ ನಂದಿಸುವ ಸಾಧನ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇವೆಯೇ ಎಂಬುದನ್ನು ತಪಾಸಣೆ ಮಾಡಲಾಯಿತು. ಜೊತೆಗೆ ಕೆಲವು ಬಸ್ಸುಗಳಲ್ಲಿ ಅನಧಿಕೃತ ಸರಕು ಸಾಗಾಣಿಕೆ ನಡೆಯುತ್ತಿದೆಯೇ ಎಂಬುದನ್ನೂ ಪರಿಶೀಲಿಸಲಾಯಿತು.
ಅಕ್ಟೋಬರ್ 24ರಿಂದ ನವೆಂಬರ್ 5ರವರೆಗೆ — 13 ದಿನಗಳ ಅವಧಿಯಲ್ಲಿ — ಒಟ್ಟು 4,452 ಖಾಸಗಿ ಬಸ್ಸುಗಳನ್ನು ತಪಾಸಣೆ ಮಾಡಲಾಗಿದೆ. ಅವುಗಳಲ್ಲಿ 604 ಬಸ್ಸುಗಳ ಮೇಲೆ ಕೇಸ್ ದಾಖಲಿಸಲಾಗಿದೆ. 102 ಬಸ್ಸುಗಳನ್ನು ಸೀಜ್ ಮಾಡಲಾಗಿದ್ದು, ದಂಡ ಮತ್ತು ತೆರಿಗೆಯ ರೂಪದಲ್ಲಿ ₹1,09,91,284 ವಸೂಲಿ ಮಾಡಲಾಗಿದೆ.
ಕರ್ನೂಲು ದುರಂತದ ನಂತರ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ಸುರಕ್ಷತಾ ನಿಯಮ ಪಾಲಿಸದ ಬಸ್ ಮಾಲೀಕರಿಗೆ ಈಗಾಗಲೇ ಬಿಸಿ ಮುಟ್ಟಿಸಿದೆ. ಈಗಾದರೂ ಬಸ್ ಮಾಲೀಕರು ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕಾಗಿದೆ.


