ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮ ನಡುವೆ ಇರುವ ಹಿರಿಯ ನಾಗರಿಕರು ಎಂದಿಗೂ ನೆಮ್ಮದಿಯಿಂದ ಬಾಳಬೇಕು ಎಂದು ಸರ್ಕಾರ ಹಲವಾರು ಕಾನೂನುಗಳನ್ನು ಮಾಡಿದೆ. ಈ ಕಾನೂನುಗಳ ಬಗ್ಗೆ ನಿಮಗೆ ಅರಿವು ಮೂಡಿಸಲು ಕಾನೂನು ಅರಿವು-ನೆರವು ಮತ್ತು ನ್ಯಾಯಾಂಗ ಇಲಾಖೆಯ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಿಮಗಾಗಿ ಇರುವ ಕಾನೂನುಗಳನ್ನು ಸರಿಯಾಗಿ ತಿಳಿದುಕೊಂಡು ನೆಮ್ಮದಿಯ ಜೀವನ ಸಾಗಿಸಿ ಎಂದು ಪ್ರಾಧಿಕಾರದ ಹಿರಿಯ ನ್ಯಾಯವಾದಿ ಎಸ್.ಎಚ್. ಹಾದಿಮನಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯ ನಾಗರಿಕರಿಗೇನಾದರೂ ಅನ್ಯಾಯವಾದರೆ ಅವರಿಗೆ ಕಾನೂನಾತ್ಮಕ ಸಲಹೆ-ಸಹಕಾರ ನೀಡಲು ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಕಾನೂನು ಪ್ರಾಧಿಕಾರವಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ನಿಮ್ಮ ಹಕ್ಕುಗಳಿಗಾಗಿ ನೀವು ಹೋರಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ನ್ಯಾಯಸಮ್ಮತವಾಗಿರಬೇಕು. ಏನೇ ತೊಂದರೆಗಳಿದ್ದರೂ ಜಿಲ್ಲಾ ನ್ಯಾಯಾಧೀಶರೊಂದಿಗೆಯೂ ಚರ್ಚಿಸಬಹುದೆಂದರು.
ಠಾಣಾಧಿಕಾರಿ ಐಶ್ವರ್ಯ ನಾಗರಾಳ ಮಾತನಾಡಿ, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಎಂದಿಗೂ ಸ್ಪಂದಿಸುತ್ತವೆ. ನಿಮ್ಮ ಅಹವಾಲುಗಳು ಏನೇ ಇದ್ದರೂ ಅವುಗಳನ್ನು ಬಗೆಹರಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮನ್ನು ಮೀರಿದ ವಿಷಯಗಳು ಇದ್ದರೆ ಅವುಗಳನ್ನು ಕಾನೂನು ಪ್ರಾಧಿಕಾರದ, ನ್ಯಾಯಾಂಗ ಇಲಾಖೆಯ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತ್ತೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ಕೋರಿದರು.
ಸಭೆಯಲ್ಲಿ ಅಧ್ಯಕ್ಷ ಡಿ.ಎ. ಅರವಟಗಿಮಠ, ಡಾ. ಆರ್.ಕೆ. ಗಚ್ಚಿನಮಠ, ಎಂ.ಎಸ್. ದಢೇಸೂರಮಠ, ವಿ.ವಿ. ಚೇಗರೆಡ್ಡಿ, ಸಂಗಮೇಶ ಹಲಬಾಗಿಲ, ಶಿವಯೋಗಿ ಜಕ್ಕಲಿ, ವಿ.ವಿ. ಕೆರಿಯವರ, ಜಿ.ಎ. ಬೆಲ್ಲದ, ಹೊಸಮನಿ, ಸುರೇಶ ಬಾಗಲಿ, ಗೋದಿ, ಎನ್.ಎಸ್. ಚಿಕ್ಕನಗೌಡ್ರ, ಎಸ್.ಬಿ. ಹಿರೇಮಠ, ಕೆ.ಎಸ್. ಕಳಕೊಣ್ಣವರ, ಕಾಶಪ್ಪ ಸಂಗನಾಳ, ಎಫ್.ಎಸ್. ಧರ್ಮಾಯತ, ಠಾಣಾ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.


