ನಟಿ ರಜಿನಿ ಅವರು ಇಂದು (ನವೆಂಬರ್ 10) ಸದ್ದಿಲ್ಲದೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ರಜಿನಿ ಅವರು, ಅರುಣ್ ಗೌಡ ಅವರೊಂದಿಗೆ ಬೆಂಗಳೂರಿನಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಬೆಳಗ್ಗೆ 9.30ರಿಂದ 10.30ರೊಳಗಿನ ಮುಹೂರ್ತದಲ್ಲಿ ನಡೆದ ಈ ಮದುವೆ ಸಾಂಪ್ರದಾಯಿಕ ರೀತಿಯಲ್ಲಿ ನಡೆದಿದೆ.
ಕಳೆದ ಎರಡು ವರ್ಷಗಳಿಂದ ರಜಿನಿ ಮತ್ತು ಅರುಣ್ ಗೌಡ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಒಟ್ಟಿಗೆ ರೀಲ್ಸ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದಲೇ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿ ಹರಿದಾಡಿತ್ತು. ಆದರೆ ಆಗ ರಜಿನಿ ಅವರು “ನಾವು ಕೇವಲ ಸ್ನೇಹಿತರು” ಎಂದು ಸ್ಪಷ್ಟನೆ ನೀಡಿದ್ದರು.
ಈಗ ಕುಟುಂಬದವರ ಒಪ್ಪಿಗೆಯೊಂದಿಗೆ ಈ ಜೋಡಿ ಸಪ್ತಪದಿ ತುಳಿದಿದ್ದು, ಅಭಿನಂದನೆಗಳ ಸುರಿಮಳೆ ಬೀಳುತ್ತಿದೆ.
ಅರುಣ್ ಗೌಡ ಅವರು ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದು, ಫಿಟ್ನೆಸ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ರಜಿನಿ ಅವರು ‘ಅಮೃತವರ್ಷಿಣಿ’ ಧಾರಾವಾಹಿಯ ಮೂಲಕ ಮನೆಮಾತಾದರು. ಸದ್ಯ ಅವರು ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ಊರ್ಮಿಳಾ ದಿವಾನ್ ಎಂಬ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮದುವೆ ಬಗ್ಗೆ ಮಾತನಾಡಿರುವ ರಜನಿ, “ಸ್ನೇಹದಿಂದ ಪ್ರಾರಂಭವಾದ ಸಂಬಂಧ ಇಂದು ಮದುವೆಯಾಗಿ ಪರಿವರ್ತನೆಗೊಂಡಿದೆ. ನಮ್ಮಿಬ್ಬರಿಗೂ ಹೊಸ ಬದುಕಿನ ಆರಂಭಕ್ಕೆ ಎಲ್ಲರ ಆಶೀರ್ವಾದ ಬೇಕು” ಎಂದು ಹೇಳಿದ್ದಾರೆ.


