ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ರಾಷ್ಟ್ರ ಮಟ್ಟದಲ್ಲಿ ನಗರ ಸಮೂಹ ಸಾರಿಗೆ ವ್ಯವಸ್ಥೆಯಡಿ ಉತ್ತಮ ಸಾರ್ವಜನಿಕ ಸಾರಿಗೆಯನ್ನು ಹೊಂದಿರುವ ನಗರದ (Urban Public Transport System) ವರ್ಗದಡಿ ಕೊಡಮಾಡುವ 2025ರ ಸಾಲಿನ ನಗರ ಸಾರಿಗೆಯ ಪ್ರಶಂಸಾ ಪ್ರಶಸ್ತಿ (Commendation for Excellence in Urban Transport) ಯು ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ಯೋಜನೆಯ ಚಿಗರಿ ಕಾರ್ಯಾಚರಣೆಗೆ ಲಭಿಸಿದೆ.
ನವದೆಹಲಿಯ ವಿಗ್ಯಾನ್ ಭವನದಲ್ಲಿ ನಡೆದ UITP ಸಮ್ಮೇಳನ 2025ರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ ಮತ್ತು ಇತರ ಗಣ್ಯರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಬಿ.ಆರ್.ಟಿ.ಎಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾದ ಸಾವಿತ್ರಿ ಬಿ. ಕಡಿ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯ ಬೆಂಗಳೂರು ಇದರ ವಿಶೇಷಾಧಿಕಾರಿ ಮೋನಿಕಾ ಕಷ್ಕರಿ ರಾಜ್ಯವನ್ನು ಪ್ರತಿನಿಧಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ಯೋಜನೆಯ ಈ ಯಶಸ್ಸಿಗೆ ಕಾರಣೀಭೂತರಾದ ಜನ ಪ್ರತಿನಿಧಿಗಳು, ಅಧಿಕಾರಿಗಳು, ಅವಳಿ ನಗರದ ಸಮಸ್ತ ನಾಗರಿಕರು ಮತ್ತು ಚಿಗರಿ ಪ್ರಯಾಣಿಕರಿಗೆ ಹೆಚ್.ಡಿ.ಬಿ.ಆರ್.ಟಿ.ಎಸ್ ಕಂಪನಿಯು ಅಭಾರಿಯಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


