ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಾಥಮಿಕ ಆರೋಗ್ಯ ಕೇಂದ್ರ ನಿಡಗುಂದಿ, ತಂಬಾಕು ನಿಯಂತ್ರಣ ಕೋಶ ಗದಗ ಹಾಗೂ ನರೇಗಲ್ಲ ಪೊಲೀಸ್ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನರೇಗಲ್ಲದ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅಂಗಡಿಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ ತಂಬಾಕು ವಸ್ತುಗಳನ್ನು ಮಾರುವವರಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ನಿರೀಕ್ಷಣಾ ಅಧಿಕಾರಿ ಮಂಜುನಾಥ ಜಾಲೀಹಾಳ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗದಗ ತಂಬಾಕು ನಿಯಂತ್ರಣ ಕೋಶದ ಬಿ.ಸಿ. ಚಿತ್ರಗಿ, ಎಎಸ್ಐ ಎಸ್.ಎಲ್. ಹೊಸಳ್ಳಿ, ಪಡಿಯಪ್ಪ ಹಲಗೇರಿ, ಕಲ್ಲಪ್ಪ ಬೂದಿಹಾಳ, ಮಂಜುನಾಥ ಜಾಲೀಹಾಳ ಇದ್ದರು. ನರೇಗಲ್ಲದ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದ ತಂಡವು ಅಂಗಡಿಕಾರರಿಂದ ಒಟ್ಟು 1900 ರೂ. ದಂಡ ವಸೂಲು ಮಾಡಿ ಸರ್ಕಾರಕ್ಕೆ ಭರಣಾ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರಗಿ, ತಂಬಾಕು ಮುಕ್ತ ವಲಯ ಎಂದರೆ ಧೂಮಪಾನ ಅಥವಾ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ವಲಯ ಎಂದರ್ಥ. ಇಂತಹ ಪ್ರದೇಶದಲ್ಲಿ ತಂಬಾಕು ಮಾರುವುದಾಗಲಿ, ಸೇವನೆ ಮಾಡುವುದಾಗಲಿ, ಧೂಮಪಾನ ಮಾಡುವುದಾಗಲಿ ಎಲ್ಲವೂ ಅಪರಾಧ. ಇಂತಹ ಪ್ರಕರಣಗಳಲ್ಲಿ ಸಂವಿಧಾನದ ಸೆಕ್ಷನ್ 4ರ ಪ್ರಕಾರ 200 ರೂ. ದಂಡ, ಸೆಕ್ಷನ್ 22ರ ಪ್ರಕಾರ ಮೊದಲ ಅಪರಾಧಕ್ಕೆ ಒಂದು ಸಾವಿರ ರೂ. ದಂಡ ಅಥವಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.


