ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವೀರವನಿತೆ ಒನಕೆ ಓಬವ್ವ ಕನ್ನಡ ನಾಡಿನ ನಾರಿಯರ ಶಕ್ತಿಯ ಪ್ರತೀಕವಾಗಿದ್ದಾರೆ. ನಾಡಿನ ಸಂರಕ್ಷಣೆಯ ಬಗ್ಗೆ ಅವರಿಗಿದ್ದ ಅಭಿಮಾನ, ಸ್ವಾಭಿಮಾನ, ಸಮರ್ಪಣಾ ಮನೋಭಾವ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪುರಸಭೆಯಲ್ಲಿ ಒನಕೆ ಓಬವ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಕನ್ನಡ ನಾಡಿನ ಹೆಮ್ಮೆಯ ಓಬವ್ವ ಸಾಬೀತುಪಡಿಸಿ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ, ನಾಡಿನ ಸಂರಕ್ಷಣೆಗಾಗಿ ಉಸಿರಿರುವವರೆಗೆ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಒನಕೆ ಓಬವ್ವ ಮೊದಲಾದವರು ಸ್ಮರಣೀಯರು. ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಸಮರ್ಪಣೆಗೈದ ವೀರಮಹಿಳೆ ಓಬವ್ವ ಇತಿಹಾಸದ ಪುಟದಲ್ಲಿ ಅಜರಾಮರರಾಗಿದ್ದಾರೆ. ಅವರ ಅಸಾಧಾರಣ ಧೈರ್ಯ, ಸಮಯ ಪ್ರಜ್ಞೆ ಮತ್ತು ದೇಶಭಕ್ತಿಯನ್ನು ನೆನಪಿಸಿಕೊಳ್ಳಲು ಸರ್ಕಾರ ಪ್ರತಿ ವರ್ಷ ನ.11ರಂದು ಅವರ ಜಯಂತಿಯನ್ನು ಆಚರಿಸುತ್ತದೆ ಎಂದರು.
ಈ ವೇಳೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ, ನೇತ್ರಾ ಹೊಸಮನಿ, ಎಸ್.ಪಿ. ಲಿಂಬಯ್ಯನಮಠ, ಸುರೇಶ ಪೂಜಾರ, ವೆಂಕಟೇಶ ರಾಮಗಿರಿ, ಬಸವಣ್ಣೆಪ್ಪ ನಂದೆಣ್ಣವರ, ಗಂಗಾಧರ ಮೆಣಸಿನಕಾಯಿ, ವಿಶಾಲ ಬಟಗುರ್ಕಿ, ತಿಪ್ಪಣ್ಣ ಕೊಂಚಿಗೇರಿ, ಮುಂತಾದವರಿದ್ದರು. ಪಟ್ಟಣ ಸೇರಿ ಗ್ರಾಮೀಣ ಭಾಗದ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಓಬವ್ವ ಜಯಂತಿ ಆಚರಿಸಲಾಯಿತು.


