ಬೆಂಗಳೂರು:- ಕರ್ನಾಟಕದಲ್ಲಿ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಗೆ ಸಿಂಗಾಪುರ ಉತ್ಸುಕವಾಗಿದೆ. ತಂತ್ರಜ್ಞಾನ ಹಂಚಿಕೊಳ್ಳುವಿಕೆ ಸೇರಿದಂತೆ ಕೈಗಾರಿಕಾ ಪಾರ್ಕ್ ಆರಂಭಿಸುವ ಬಗ್ಗೆ ಸಿಂಗಾಪುರ ವಿದೇಶಾಂಗ ಸಚಿವರೊಂದಿಗೆ ಚರ್ಚೆ ನಡೆದಿದೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಿಂಗಾಪುರದ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಗಾನ್ ಶಿಯೋ ಹುಯಾಂಗ್ ಅವರ ನೇತೃತ್ವದ ನಿಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, “ಕಳೆದ ವರ್ಷ ಸಿಂಗಾಪುರದ ಕೌನ್ಸಲೇಟ್ಗೆ ಬಂದಿದ್ದರು. ನಾಳೆ ಅವರು ಬೆಂಗಳೂರಿನಲ್ಲಿ ಕಚೇರಿ ಆರಂಭಿಸುತ್ತಿದ್ದಾರೆ. ಅವರು ಒಪ್ಪಿದರೆ, ಒಂದು ಬಹುಮಹಡಿ ಕಟ್ಟಡ ನಿರ್ಮಿಸಿ ಎಲ್ಲಾ ಕಚೇರಿಗಳು ಒಂದೇ ಸ್ಥಳದಲ್ಲಿ ಇರಲೆಂದು ಪ್ರಸ್ತಾವನೆ ನೀಡಿದ್ದೇನೆ,” ಎಂದು ಹೇಳಿದರು.
“ಈ ವಿಷಯವಾಗಿ ನಾನು ಇತರ ದೇಶಗಳ ಪ್ರತಿನಿಧಿಗಳೊಂದಿಗೆ ಸಹ ಚರ್ಚೆ ನಡೆಸಿದ್ದೆ. ಭದ್ರತಾ ಕಾರಣಗಳಿಂದ ಕೆಲವರು ವಿರೋಧಿಸಿದ್ದರು. ಆದರೆ ಈಗ ನಾವು ಹೊಸ ಪ್ರಯತ್ನ ಮಾಡುತ್ತಿದ್ದೇವೆ. ಹಲವು ದೇಶದ ಜನರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ,” ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.


