ನ. 14ರಂದು`ಉಡಾಳ’ ಚಲನಚಿತ್ರ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಂಪೂರ್ಣ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಒಳಗೊಂಡಿರುವ ‘ಉಡಾಳ’ ಚಲನಚಿತ್ರವು ನ. 14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರತಂಡದ ಸದಸ್ಯ ಹರೀಶ ಹಿರಿಯೂರು ತಿಳಿಸಿದರು.

Advertisement

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡಾಳ ಚಿತ್ರವು ಪಕ್ಕಾ ಉತ್ತರ ಕರ್ನಾಟಕದ ವಿಶಿಷ್ಟ ಭಾಷೆಯಲ್ಲಿ, ವಿಜಯಪುರ ಭಾಗದಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿದೆ. ಪೃಥ್ವಿ ಶಾವನೂರು ನಾಯಕ ನಟನಾಗಿ ನಟಿಸಿರುವ ಈ ಚಿತ್ರವು ಅಮೋಲ್ ಪಾಟೀಲ ಅವರ ಕನಸಿನ ಕೂಸಾಗಿದ್ದು, ಅವರದೇ ನಿರ್ದೇಶನದಲ್ಲಿ ಮೂಡಿಬಂದಿದೆ. ಯೋಗರಾಜ್ ಭಟ್ ಮತ್ತು ರವಿ ಶಾವನೂರು ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದರು.

ಉತ್ತರ ಕರ್ನಾಟಕದ ಕಥಾ ಹಂದರವನ್ನು ಹೊಂದಿರುವ ಕಾರಣ ಚಿತ್ರದಲ್ಲಿ ಉತ್ತರ ಕರ್ನಾಟಕದ ಹೆಸರಾಂತ ಯೂಟ್ಯೂಬರ್‌ಗಳು, ರಂಗಭೂಮಿ ಕಲಾವಿದರು ಹಾಗೂ ಕಾಮಿಡಿ ಕಿಲಾಡಿಗಳ ಕಲಾವಿದರು ನಟಿಸಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಲನಚಿತ್ರವನ್ನು ವೀಕ್ಷಿಸಬೇಕು ಎಂದು ಹರೀಶ ಹಿರಿಯೂರು ವಿನಂತಿಸಿಕೊಂಡರು.

ನಾಯಕ ನಟ ಪೃಥ್ವಿ ಶಾವನೂರು ಮಾತನಾಡಿ, ಈಗಾಗಲೇ ಉಡಾಳ ಚಲನಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಉತ್ತರ ಕರ್ನಾಟಕದ ಖ್ಯಾತ ಗಾಯಕರಾದ ಮಾಳು ನಿಪ್ಪನಾಳ, ಬಾಳು ಬೆಳಗುಂದಿ ಮತ್ತು ಕರಿಬಸವ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಗದಗ ಜಿಲ್ಲೆಯಲ್ಲಿ ಈ ಚಲನಚಿತ್ರವು ಮಹಾಲಕ್ಷ್ಮಿ ಟಾಕೀಜ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಎಲ್ಲಾ ಯುವ ಪ್ರತಿಭೆಗಳನ್ನು ಜಿಲ್ಲೆಯ ಜನರು ಚಿತ್ರಮಂದಿರದಲ್ಲಿ ವೀಕ್ಷಿಸಿ ಆಶೀರ್ವದಿಸಬೇಕು ಎಂದು ಕೋರಿದರು.


Spread the love

LEAVE A REPLY

Please enter your comment!
Please enter your name here