ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬಡತನ ಹಾಗೂ ನಿರುದ್ಯೋಗ ನಮ್ಮ ದೇಶದಲ್ಲಿ ಪ್ರಮುಖ ಸಮಸ್ಯೆ. ನಿರಕ್ಷರತೆ ಇಂದು ನಿವಾರಣೆಯಾಗುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದದ ರುಡ್ಸೆಟ್ ಸಂಸ್ಥೆಯನ್ನು ಹುಟ್ಟುಹಾಕಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.
ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಲ್ಲಿ ಸಂಘದ ಸದಸ್ಯರಿಗೆ ಹಮ್ಮಿಕೊಂಡಿರುವ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರುದ್ಯೋಗ ನಿವಾರಣೆಗೆ ಉಚಿತ ತರಬೇತಿಯಲಿಂದ ಕುಟುಂಬದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಂದು ಕೈಮಗ್ಗ ಹೋಗಿ ಯಾಂತ್ರೀಕರಣದಿಂದ ಬಟ್ಟೆ ತಯಾರಿಸಲಾಗುತ್ತದೆ. ಇಂತಹ ಅನೇಕ ತರಬೇತಿ ನೀಡಿ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಲಾಗಿದೆ. ತರಬೇತಿ ಪಡೆಯುವವರಿಗೆ ಕೆಲಸದಲ್ಲಿ ಆಸಕ್ತಿ ಬೇಕು. ಕಲಿತ ವಿದ್ಯೆ ಮರೆಯುವದಿಲ್ಲ. ಇದರಿಂದ ಆರ್ಥಿಕ ಬಲ ಹೆಚ್ಚಿಸುತ್ತದೆ ಎಂದರು.
ಯೋಜನಾಧಿಕಾರಿ ಪುನಿತ ಓಲೇಕಾರ ಮಾತನಾಡಿ, ತರಬೇತಿಯ 3 ತಿಂಗಳ ಅವಧಿಯಲ್ಲಿ ಜ್ಞಾನವಿಕಾಸ ಮಾಡಿಕೊಳ್ಳಿ. ಅದರಿಂದ ಕುಟುಂಬದ ಆರ್ಥಿಕ ಸಬಲತೆ ಹೆಚ್ಚಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಮಹೇಶ್ ನೀಲಗುಂದ, ಮೇಲ್ವಿಚಾರಕಿ ಬಿ. ಶಾಂತಾ, ಸೇವಾ ನಿರತರು, ಸಂಘದ ಸದಸ್ಯರು ಭಾಗವಹಿಸಿದ್ದರು.


