ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಶಿಕ್ಷಣ ವ್ಯವಸ್ಥೆಯು ಪಠ್ಯಕ್ರಮ ಆಧಾರಿತವಾಗಿದ್ದು, ಅದರೊಟ್ಟಿಗೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿಸಲು ತಾಂತ್ರಿಕ ಶಿಕ್ಷಣದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವೆಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಅಭಿಪ್ರಾಯಪಟ್ಟರು.
ಗದಗ ತಾಲೂಕಿನ ಬೆಳಧಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಟಗೇರಿ-ಗದುಗಿನ ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿಕಾರ್ಮಿಕರ ಸಂಘ ಏರ್ಪಡಿಸಿದ್ದ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ನಿವೃತ್ತ/ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕೂಲಿಕಾರ್ಮಿಕರ ಸಂಘವು ಪ್ರತಿ ವರ್ಷ ಈ ರೀತಿಯ ರಚನಾತ್ಮಕ ಕಾರ್ಯ ಮಾಡಿಕೊಂಡು ಬಂದಿದ್ದು, ಬರಲಿರುವ ದಿನಗಳಲ್ಲಿ ಇಂತಹ ಕಾರ್ಯಕ್ರಮ ರೂಪಿಸುವ ಮುನ್ನ ಸಂಘಟನೆಯವರು ನನ್ನೊಂದಿಗೆ ಚರ್ಚಿಸಿದಲ್ಲಿ ನನ್ನ ವಿಚಾರಗಳನ್ನು ತಿಳಿದುಕೊಂಡರೆ ನನ್ನಿಂದಾದ ಸಹಕಾರ ನೀಡುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಈಶಪ್ಪ ಬಳ್ಳಾರಿ ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗದಗ ಗ್ರಾಮೀಣ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಿ.ಎಚ್. ಬಾವಿಕಟ್ಟಿ, ಬೆಳಧಡಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಪೂಜಾರ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಈರಣ್ಣ ಕಲ್ಮಠ, ಗದಗ-ಬೆಟಗೇರಿ ನಗರಸಭೆಯ ಸದಸ್ಯ ಚಂದ್ರಶೇಖರಗೌಡ ಕರಿಸೋಮನಗೌಡ್ರ, ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಸುಷ್ಮಾ ಮೈತ್ರಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಮೊಹಮ್ಮದ್ ಇರ್ಫಾನ್ ಡಂಬಳ ಆಗಮಿಸಿದ್ದರು.
ವೇದಿಕೆಯ ಮೇಲೆ ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವ್ಹಿ.ಎಂ. ಹಿರೇಮಠ, ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕ್ರಪ್ಪ ಹೊಸಮನಿ, ಕುಬೇರಪ್ಪ ಪವಾರ, ಪ್ರಶಸ್ತಿ ವಿಜೇತ ಶಿಕ್ಷಕಿ ಕರ್ಜಗಿ, ಫಕ್ಕೀರೇಶ ಗಾಣಿಗೇರ, ಎಸ್.ಪಿ. ಕರಿಸೋಮನಗೌಡ್ರ, ಮಹಾಂತೇಶ ಕೊಪ್ಪದ, ಸಿದ್ಧಿ ಮೊಹಮ್ಮದ್, ಮೋತಿಲಾಲ ಮ್ಯಾಳಗಿಮನಿ, ಚಾಂದಸಾಬ ಅಬ್ಬಿಗೇರಿ, ಚನ್ನವೀರಗೌಡ ಪಾಟೀಲ ಉಪಸ್ಥಿತರಿದ್ದರು.
ಕಾರ್ಮಿಕ ಸಂಘದ ಕಾರ್ಯದರ್ಶಿ ಶಂಕರಗೌಡ ಭರಮಗೌಡ್ರ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಭೋಜರಾಜ ಹಡಪದ ನಿರೂಪಿಸಿದರು. ನಿಂಗಪ್ಪ ಕಟ್ಟಿಮನಿ ವಂದಿಸಿದರು. ಸಮಾರಂಭದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
ನಾವು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಕ್ಷಕರು ಅಧ್ಯಯನಶೀಲರಾಗಿ ಕಲಿಸುವ ಹಾಗೂ ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಇದು ಸಾಕಾರಗೊಳ್ಳಲು ಸಾಧ್ಯ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕವಾದ ಫಲಿತಾಂಶವನ್ನು ಕಂಡುಕೊಂಡಾಗ ಮಾತ್ರ ಮುಂದಿನ ಅಧ್ಯಯನಕ್ಕೆ ಪ್ರವೇಶ ಸುಗಮಗೊಳ್ಳುವದು. ಮಕ್ಕಳ ಭವ್ಯ ಭವಿಷ್ಯ ರೂಪುಗೊಳ್ಳಲು ಕಲಿಸುವ, ಕಲಿಯುವ ಕಾರ್ಯ ನಿರಂತರವಾಗಿ ಇರಬೇಕೆಂದು ಕೃಷ್ಣಗೌಡ ಪಾಟೀಲ ಅಭಿಪ್ರಾಯಪಟ್ಟರು.


