ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ವಾಸ್ತವಿಕತೆಯ ನೆಲಗಟ್ಟಿನಲ್ಲಿ ಹೋರಾಟ ಸಾಗಬೇಕು ಮತ್ತು ಅದು ದಾರಿ ತಪ್ಪದಿರಲಿ ಎಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಹೇಳಿದರು.
ಈ ಕುರಿತು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಬಲ ಬೆಲೆ ಘೋಷಿಸಿದ್ದರಿಂದ ರೈತರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಈ ವೇಳೆಗಾಗಲೇ ಖರೀದಿ ಕೇಂದ್ರ ಶುರು ಮಾಡಬೇಕಿತ್ತು. ಆದರೆ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಗ್ಯಾರಂಟಿ ಯೋಜನೆ ನೆಪದಲ್ಲಿ ಖಜಾನೆ ಖಾಲಿ ಆಗಿದೆ. ಈಗ ಮೆಕ್ಕೆಜೋಳ ಖರೀದಿಸುವುದು ಸರ್ಕಾರಕ್ಕೆ ಆಗದ ಕೆಲಸ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ ನಿರ್ಧಾರ ತೆಗೆದುಕೊಂಡಾಗ ಮಾತ್ರ ಖರೀದಿ ಕೇಂದ್ರ ಆರಂಭ ಆಗಬಹುದು. ಇಲ್ಲದಿದ್ದರೆ ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನ ಇಲ್ಲ ಎಂದು ತಿಳಿಸಿದ ಅವರು, ಆಮರಣಾಂತ ಉಪವಾಸ ನಡೆಸುತ್ತಿರುವ ಕುಮಾರ ಮಹಾರಾಜರಿಗೆ ಹೆಚ್ಚು ಕಡಿಮೆ ಆದರೆ ಇಡೀ ಊರಿಗೆ ಕೆಟ್ಟ ಹೆಸರು ಬರುತ್ತದೆ ಎಂದರು.
ಪದೇಪದೇ ಊರನ್ನು ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ, ಕೂಲಿಕಾರರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗುತ್ತದೆ. ಕಾರಣ ಹೋರಾಟಗಾರರು ಬಂದ್ಗೆ ಕರೆ ನೀಡುವ ಮೊದಲು ಸಾಕಷ್ಟು ಬಾರಿ ವಿಚಾರ ಮಾಡಬೇಕು ಎಂದರಲ್ಲದೆ, ರೈತರ ನ್ಯಾಯಯುತ ಬೇಡಿಕೆಗೆ ಯಾವಾಗಲೂ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಎಸ್.ಪಿ. ಪಾಟೀಲ, ವಿ.ಜಿ. ಪಡಿಗೇರಿ, ಸೋಮಣ್ಣ ಉಪನಾಳ, ಬಸವೇಶ ಮಹಾಂತಶೆಟ್ಟರ, ಅಪ್ಪಣ್ಣ ಸಾಲಿ ಮಾತನಾಡಿದರು. ಚಂಬಣ್ಣ ಬಾಳಿಕಾಯಿ, ಡಿ.ಬಿ. ಬಳಿಗಾರ, ನಿಂಗಪ್ಪ ಬನ್ನಿ, ಶಾಂತಣ್ಣ ಬಳ್ಳಾರಿ, ನಿಂಗಪ್ಪ ಹುನಗುಂದ, ಹನಮಂತಪ್ಪ ತಳವಾರ, ಎನ್.ಎನ್. ನೆಗಳೂರ, ಬಸಣ್ಣ ಹಂಜಿ, ಮಹಾದೆವಪ್ಪ ಅಣ್ಣಿಗೇರಿ, ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ, ಗಂಗಾಧರ ಮೆಣಸಿನಕಾಯಿ, ಎಂ.ಆರ್. ಪಾಟೀಲ ಮತ್ತಿತರರು ಇದ್ದರು.


