ಬಾಗಲಕೋಟೆ: ರಾಜ್ಯ ಸರಕಾರದ ಆಡಳಿತದ ಎರಡೂವರೆ ವರ್ಷ ಮುಗಿದಿದೆ. ಇಲ್ಲಿನವರೆಗೆ ಆಗಿದ್ದೇನು? ಮುಂದೆ ಆಗಬೇಕಾದುದೇನು ಎಂಬ ರೋಡ್ಮ್ಯಾಪ್ ಈ ಸರಕಾರಕ್ಕೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಬ್ಬರದು ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಮುಗಿದಿದೆ; ಈಗ ಅಧಿಕಾರ ಹಸ್ತಾಂತರ ಮಾಡಿ ನಮಗೆ ಕೊಡಿ ಎಂಬುದೇ ಅವರ ಪ್ರಯತ್ನ. ಆ ರೀತಿ ಕೊಡುವ ಸಂದರ್ಭದಲ್ಲಿ ಒಂದು ಡಜನ್ ಲೀಡರ್ಗಳು ಈಗ ಕ್ಯೂನಲ್ಲಿ ನಿಂತಿದ್ದಾರೆ ಎಂದು ಕಾಣಿಸುವುದಾಗಿ ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದ್ದಿದೆ, ಅಂದರೆ ಅದು ಅಭಿವೃದ್ಧಿಶೂನ್ಯವಾಗಿದೆ ಎಂದು ಆರೋಪಿಸಿದರು. ಕೇವಲ ಕೆಲವು ಗ್ಯಾರಂಟಿ ಕೊಟ್ಟಿದ್ದೇವೆ, ಇದರಲ್ಲೇ 5 ವರ್ಷ ಕಾಲಹರಣ ಮಾಡಬಹುದೆಂಬ ಭಾವನೆಯಲ್ಲಿ ಈ ಸರಕಾರ ಇದ್ದ ಹಾಗಿದೆ ಎಂದು ಆಕ್ಷೇಪಿಸಿದರು.
ಅವರು ಮಾಡುವ ದುಂಡಾವರ್ತಿ, ಭ್ರಷ್ಟಾಚಾರ, ಕಾನೂನಾತ್ಮಕವಾಗಿ ಅನೇಕ ವಿಚಾರಗಳನ್ನು ಅವರು ತಿರುಚಿ ಕೆಲಸ ಮಾಡುತ್ತಿರುವುದನ್ನು ನೋಡಿದ್ದೇವೆ. ಅವರ ಸರಕಾರದಲ್ಲಿ ಭಾಗಿಯಾದವರೇ ಈ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ಹೇಳುತ್ತಾರೆ ಎಂದು ವಿವರಿಸಿದರು.


