ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಹಾಗೂ ಜ್ಞಾನ ವೃದ್ಧಿಸಲು ವಿಜ್ಞಾನ ಪ್ರದರ್ಶನ ಸಹಕಾರಿಯಾಗಿದೆ ಎಂದು ಬ್ರೆಟ್ ಹಾರಿಝೋನ್ ಪ್ರೌಢಶಾಲೆಯ ಅಧ್ಯಕ್ಷ ಬಿ.ಡಿ. ಹರ್ತಿ ಹೇಳಿದರು.
ಅವರು ಬ್ರೆಟ್ ಹಾರಿಝೋನ್ ಪ್ರೌಢಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ನಾಟಕ ಸ್ಪರ್ಧೆ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಇಂದು ಆಧುನಿಕ ತಂತ್ರಜ್ಞಾನ ಅತೀ ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನದಲ್ಲಿ ಸಾಕಷ್ಟು ಕೌಶಲ್ಯ ಹೊಂದಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದ್ದು, ಕಠಿಣ ಶ್ರಮದಿಂದ ಸಾಧನೆ ಸಾಧ್ಯವಾಗುತ್ತದೆ ಎಂದರು.
ಇಂಜಿನಿಯರ್ ವಿಭಾಗದಲ್ಲಿ ಶ್ರೇಯಸ್ ಮಲ್ಲೂರ, ಶಶಾಂಕ ಜನ್ನದಾಸರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ, ಬಾಹ್ಯಾಕಾಶ ವಿಭಾಗದಲ್ಲಿ ಹಪ್ಸಾ ಯರಗುಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಬಿಇಓ ವಿ.ವಿ. ನಡುವೆಮನಿ, ಶಂಕರ ಹಡಗಲಿ, ಜೆ.ಎ. ಭಾವಿಕಟ್ಟಿ, ರವಿ ಡಂಬಳ, ಎಂ.ಎನ್. ದೇಸಾಯಿ, ಎಸ್.ಎನ್. ಗದಗ, ಎಸ್.ಎಫ್. ಬೆಳದಡಿ ಇದ್ದರು.



