ವಿಜಯಸಾಕ್ಷಿ ಸುದ್ದಿ, ಡಂಬಳ: ಕ್ರೀಡಾಕೂಟವು ನಮ್ಮಲ್ಲಿ ದೈಹಿಕ ಕ್ಷಮತೆ ಬೆಳೆಸುವುದಷ್ಟೇ ಅಲ್ಲ, ಮನೋಬಲವನ್ನು ಗಟ್ಟಿಗೊಳಿಸುತ್ತದೆ. ಗೆಲುವಿನಲ್ಲಿ ವಿನಯ ಮತ್ತು ಸೋಲಿನಲ್ಲಿ ಸಹಿಷ್ಣುತೆ ಕಲಿಸುವ ಮಹತ್ವದ ವೇದಿಕೆ ಕ್ರೀಡೆಯಾಗಿದೆ ಎಂದು ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಹೇಳಿದರು.
ಡಂಬಳ ಗ್ರಾಮದ ತೋಂಟದಾರ್ಯ ಆವರಣದಲ್ಲಿ ಯೂಥ್ ಫಾರ್ ಚೇಂಜ್ ವೇದಿಕೆ ಹಾಗೂ ಅಹಿಂದ ಜನತಾ ಸಂಘ, ಗದಗ ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಬದಲಾವಣೆಯಾದಂತೆ ಮನುಷ್ಯನ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತಿದೆ. ಆ ಹಿನ್ನೆಲೆ ಯೋಗಾಸನ ಕ್ರೀಡೆಗೆ ಆದ್ಯತೆ ನೀಡಬೇಕು. ಇಂತಹ ಕಾರ್ಯಕ್ಕೆ ಯುವಕರು ಮುಂದಾಗಿರುವುದು ಪ್ರಶಂಸನೀಯ ಎಂದು ಹೇಳಿದರು.
ದೈಹಿಕ ಶಿಕ್ಷಕ ಎಸ್.ಎಸ್. ಕೆಂಬಾವಿ ಮಾತನಾಡಿ, ದುಶ್ಚಟಗಳಿಂದ ಮುಕ್ತವಾಗಿರಲು ಕ್ರೀಡೆ ಸಹಕಾರಿ. ದೈಹಿಕವಾಗಿ, ಮಾನಸಿಕವಾಗಿ ಸದೃಢತೆ ಸಾಧಿಸಲು ಕ್ರೀಡೆಯಿಂದ ಮಾತ್ರ ಸಾಧ್ಯ. ಸತತ ಪ್ರಯತ್ನದಿಂದ ಮಾನಸಿಕವಾಗಿ ಸದೃಢತೆಯ ಮೂಲಕ ಎಲ್ಲಾ ಆಯಾಮದಲ್ಲಿ ಆಡುವುದು ಮುಖ್ಯವಾಗಿದೆ. ಯುವಕರು ಉತ್ತಮ ಆರೋಗ್ಯಕ್ಕೆ ಆದ್ಯತೆ ನೀಡುವುದಕ್ಕಾಗಿ ಕ್ರೀಡಾ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಬರದೂರ ಗ್ರಾಮದ ಹರಿಓಂ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ಶಿರುಂದ ಗ್ರಾಮದ ಚೆನ್ನವೀರ ಕಣವಿ ಅಭಿಮಾನಿ ಬಳಗ ದ್ವಿತೀಯ, ಮರುಳಸಿದ್ದೇಶ್ವರ ತೃತೀಯ, ಡೋಣಿ ಗ್ರಾಮದ ಕ್ರೀಡಾಳುಗಳು 4ನೇ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ ಎಸ್.ಎಸ್. ಬಿಚಾಲಿ, ಭೀಮಪ್ಪ ಗದಗಿನ, ಬುಡ್ನೆಸಾಬ ಅತ್ತಾರ, ಮಂಜುನಾಥ ಸಂಜೀವಣ್ಣವರ, ಶಿವು ಮಠದ, ಶಿವನಗೌಡ ಪಾಟೀಲ, ರಾಮಪ್ಪ ಹೊಸಕೇರಿ, ಮಾಜಿ ಸೈನಿಕ ಕಾಸಿಮಲಿ ಬೆನಕೊಪ್ಪ, ಕೆ.ಕೆ. ಹೂಗಾರ, ಅಪೂರ್ವ ಮಾದರ, ಪ್ರಕಾಶ ಮೇಗೂರ, ಹರೀಶ ಯಲಭೋವಿ, ಆದಿತ್ಯ ಗದಗಿನ ಸೇರಿದಂತೆ ಸಂಘದ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಇದ್ದರು. ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿ ವಂದಿಸಿದರು.


