ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಮೂಲಕ ಭಾರೀ ಯಶಸ್ಸು ಕಂಡಿದ್ದಾರೆ. ನಿರ್ಮಾಣ ಹಂತದಲ್ಲಿ ಎದುರಿಸಿದ್ದ ಅನೇಕ ಸವಾಲುಗಳನ್ನು ಜಯಿಸಿ ಸಿನಿಮಾ ಪೂರ್ತಿಗೊಂಡು ಬಿಡುಗಡೆಯಾದ ನಂತರ ರಿಷಬ್ಗೆ ದೇಶವ್ಯಾಪಿ ಹೆಸರು-ಗೌರವ ಸಿಕ್ಕಿದೆ. ಈಗ ಆ ಯಶಸ್ಸಿನ ಹರಕೆಯನ್ನು ತೀರಿಸಲು ಅವರು ಕುಟುಂಬ ಸಮೇತರಾಗಿ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನಕ್ಕೆ ಆಗಮಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ‘ಹೊಂಬಾಳೆ ಫಿಲ್ಮ್ಸ್’ ತಂಡವೂ ರಿಷಬ್ಗೆ ಜೊತೆಯಾಗಿದೆ.
ಮಂಗಳೂರಿನಲ್ಲಿ ನಡೆದ ಹರಕೆ ನೇಮೋತ್ಸವದಲ್ಲಿ ಚಿತ್ರತಂಡ ಭಾಗವಹಿಸಿದ್ದು, ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ರಿಷಬ್, ಅವರ ಪತ್ನಿ, ಮಕ್ಕಳು ಮತ್ತು ಚಿತ್ರರಂಗದ ಹಲವರು ಹಾಜರಿದ್ದರು. ಗಗ್ಗರ ಸೇವೆ ಹಾಗೂ ಅನ್ನಸಂತರ್ಪಣೆ ಕಾರ್ಯದಲ್ಲೂ ‘ಕಾಂತಾರ’ ತಂಡ ತೊಡಗಿಸಿಕೊಂಡಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿಯೇ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಕುಟುಂಬ ಭಾಗಿಯಾಗಿತ್ತು. ಮಗನ ಹುಟ್ಟುಹಬ್ಬದ ದಿನವೂ ರಿಷಬ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈಗ ಅದೇ ಸ್ಥಳದಲ್ಲಿ ಹರಕೆ ತೀರಿಸಿರುವ ದೃಶ್ಯಗಳು ವಿಡಿಯೋ ರೂಪದಲ್ಲೂ ಹೊರಬಂದಿವೆ.
ಈ ಮೊದಲು ದೈವ ರಿಷಬ್ ಅವರಿಗೆ ಸಿನಿಮಾ ಲೋಕದಲ್ಲಿ ಜಾಗರೂಕತೆಯಿಂದ ಇರಬೇಕೆಂದು ಸೂಚನೆ ನೀಡಿತ್ತು. ಎಲ್ಲೆಡೆ ದುಷ್ಮನ್ಗಳು ಇರಬಹುದು, ಹೀಗಾಗಿ ಎಚ್ಚರಿಕೆ ಅಗತ್ಯ ಎಂಬ ಸೂಚನೆಯೊಂದಿಗೆ ಕಟ್ಟಿಕೊಂಡಿದ್ದ ಹರಕೆಯನ್ನು ಪೂರ್ಣಗೊಳಿಸುವಂತೆ ದೈವ ಸಲಹೆ ನೀಡಿತ್ತು. ‘ಕಾಂತಾರ: ಚಾಪ್ಟರ್ 1’ ಬ್ಲಾಕ್ಬಸ್ಟರ್ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಹರಕೆ ತೀರಿಸಿದ್ದಾರೆ.



