ಚಿತ್ರದುರ್ಗ:- ಮದ್ಯದ ಅಮಲಿನಲ್ಲಿ ಹೆತ್ತ ತಂದೆಯೇ ತನ್ನ ಇಬ್ಬರು ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ತನ್ನ 13 ಮತ್ತು 10 ವರ್ಷದ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ನಡೆಸಿದ ಪಾಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಜಮೀನಿಗೆ ಕರೆದೊಯ್ದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಈತನ ನಡೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಕೂಡ ಸಲ್ಲಿಕೆ ಮಾಡಿದ್ದಾರೆ.
ಈ ಬಗ್ಗೆ ಕಾಮುಕನ ತಾಯಿ ಮಾತನಾಡಿ, ಮದ್ಯದ ಅಮಲಿನಲ್ಲಿ ಇರುತ್ತಿದ್ದ ಮಂಜುನಾಥ ಈ ಹಿಂದೆ ತನ್ನ ಮೇಲೂ ದೌರ್ಜನ್ಯಕ್ಕೆ ಯತ್ನಿಸಿದ್ದ. ಈ ವೇಳೆ ತಾನು ಆತನಿಂದ ತಪ್ಪಿಸಿಕೊಂಡಿದ್ದೆ. ಬಳಿಕ ಆ ಮನೆಯನ್ನು ಬಿಟ್ಟು ಬೇರೆಡೆ ಹೋಗಿದ್ದೆ ಎಂದು ಆರೋಪಿಯ ತಾಯಿ ಕೂಡ ಗಂಭೀರ ಆರೋಪ ಮಾಡಿದ್ದಾರೆ.
ಆತ ಮಕ್ಕಳಿಗೆ ಏನಾದರೂ ತೊಂದರೆ ಮಾಡಿದ್ರೆ ಎಂಬ ಪ್ರಶ್ನೆಯೂ ತನಗೆ ಬಂದಿತ್ತು. ಆದರೆ, ಅವರಿಬ್ಬರೂ ಅವನದ್ದೇ ಮಕ್ಕಳಾಗಿರುವ ಕಾರಣ ಆತ ಹೀಗೆ ಮಾಡಲ್ಲ ಎಂದು ತಿಳಿದಿದ್ದೆ. ಮಕ್ಕಳನ್ನೂ ಆತ ಓದಲೂ ಕಳುಹಿಸುತ್ತಿರಲಿಲ್ಲ. ಈ ವಿಚಾರವನ್ನು ಅವರು ಟೀಚರ್ ಬಳಿಗೂ ಹೇಳಿಕೊಂಡಿದ್ದರಂತೆ. ಇಂತಹ ನೀಚನಿಗೆ ಗಲ್ಲುಶಿಕ್ಷೆ ಆಗಬೇಕು. ಅವನನ್ನು ಬಿಟ್ಟರೆ ಬೇರೆಯವರ ಮಕ್ಕಳಿಗೂ ತೊಂದರೆ ಆಗಬಹುದು. ನಮಗಾದ ತೊಂದರೆ ಬೇರೆಯವರಿಗೆ ಆಗಬಾರದು ಎಂದು ಭಾವುಕರಾಗಿದ್ದಾರೆ.



