
ಕೊಪ್ಪಳ: ನಗರದ ಡಾ.ಸಿಂಪಿ ಲಿಂಗಣ್ಣ ರಸ್ತೆಯ ಶ್ರೀ ಗಜಾನನ ಗೆಳೆಯರ ಬಳಗದಿಂದ ಪ್ರತಿ ವರ್ಷದಂತೆ ಈ ಸಲವೂ ಸಹ ಜನೋಪಯೋಗಿ, ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಪ್ರಪಂಚವನ್ನೇ ಬಾಧಿಸುತ್ತಿರುವ ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ಎಲ್ಲೆಡೆ ಲಸಿಕೆ ನೀಡಿಕೆ ಹಾಗೂ ಜಾಗೃತಿ ನಡೆಯುತ್ತಿದ್ದು, ಬಳಗದ ವತಿಯಿಂದ ಶನಿವಾರ ಸಾರ್ವಜನಿಕರಿಗೆ ಕೋವಿಶೀಲ್ಡ್ ಲಸಿಕೆ ಹಾಕಲಾಯಿತು. ಸುಮಾರು 50ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಾಮಾಂಜನೇಯ, ವೈದ್ಯಾಧಿಕಾರಿ ಡಾ.ಮಹೇಶ್ ಹಾಗೂ ಆರೋಗ್ಯ ಸಿಬ್ಬಂದಿ ಯಲ್ಲಪ್ಪ, ನೀಲಗಂಗಮ್ಮ ಹಾಗೂ ಅನಿತಾ ಶಿಬಿರ ಯಶಸ್ವಿಯಾಗಲು ಸಹಕರಿಸಿದರು.
ಮೂರ್ತಿ ಪ್ರತಿಷ್ಠಾಪನೆ
ಈ ವರ್ಷವೂ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅನಿವಾರ್ಯತೆ ಇರುವುದರಿಂದ ಶ್ರೀ ಗಜಾನನ ಗೆಳೆಯರ ಬಳಗವು 5 ದಿನಗಳ ಬದಲು 3 ದಿನಗಳ ಮಟ್ಟಿಗೆ ಗಣೇಶ ಮೂರ್ತಿಯನ್ನು ಶುಕ್ರವಾರ ಪ್ರತಿಷ್ಠಾಪಿಸಿತು. ಮೂರ್ತಿ ಪ್ರತಿಷ್ಠಾಪನಾ ಪೂಜಾ ಸಮಾರಂಭವನ್ನು ನಗರಸಭೆಯ ಅಧ್ಯಕ್ಷೆ ಶ್ರೀಮತಿ ಲತಾ ಚಿನ್ನೂರು, ಗವಿಸಿದ್ದಪ್ಪ ಚಿನ್ನೂರು ಹಾಗೂ ನಗರಸಭೆ ಸದಸ್ಯ ಗುರು ಹಲಗೇರಿ ನಡೆಸಿಕೊಟ್ಟರು. ಮುಖಂಡರಾದ ಬಸವರಾಜ ನೀರಲಗಿ, ಪ್ರತಾಪ್, ಆನಂದ್ ವಿರಕ್ತಮಠ, ಶಿವು ನಾಲ್ವಾಡ್, ರಾಕೇಶ್, ಬಸವರಾಜ ಕರುಗಲ್, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಹಕ್ಕಂಡಿ, ಜಗನ್ನಾಥಗೌಡ, ಬಸವರಾಜ ಕೋರಿ, ಅಮರೇಶ್ ಕೋರಿ ಮತ್ತಿತರರು ಇದ್ದರು.