ವಿಜಯಸಾಕ್ಷಿ ಸುದ್ದಿ, ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಮಟ್ಟದ ಕಲಾಪ್ರತಿಭೋತ್ಸವ-2025ರ ವಿವಿಧ ಕಲಾ ಪ್ರಕಾರಗಳಲ್ಲಿ ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಮತ್ತು ಯುವ ಪ್ರತಿಭೆಗಳ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಯಿತು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ರಂಜನಾ ದರ್ಗಾ, ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ, ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ಟ್ರಸ್ಟ್ ಸದಸ್ಯ ಡಾ. ಬಿ.ಎಚ್. ಕುರಿಯವರ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಬಾಲ, ಕಿಶೋರ ಮತ್ತು ಯುವ ಪ್ರತಿಭೆಗಳ ಸುಗಮ ಸಂಗೀತ ಸ್ಪರ್ಧೆ, ಯುವ ಪ್ರತಿಭೆಗಳ ನನ್ನ ಮೆಚ್ಚಿನ ಸಾಹಿತಿ ಆಶು ಭಾಷಣ ಸ್ಪರ್ಧೆ ಹಾಗೂ ಯುವ ಪ್ರತಿಭೆಗಳ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಾಲ, ಕಿಶೋರ ಹಾಗೂ ಯುವ ಪ್ರತಿಭೆಗಳ ಸುಗಮ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಆರತಿ ಪಾಟೀಲ, ಶ್ರೀಕಾಂತ ಬಾಕಳೆ ಹಾಗೂ ಭಾರ್ಗವಿ ಕುಲಕರ್ಣಿ ಅವರು ಭಾಗವಹಿಸಿದ್ದರು. ಯುವ ಪ್ರತಿಭೆಗಳ ಆಶು ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಈರಣ್ಣ ಇಂಜಗನೇರಿ, ಸಂಗಮೇಶ ಹಡಪದ ಹಾಗೂ ಡಾ. ದುಂಡಪ್ಪ ನಾಂದ್ರೆ ಇದ್ದರು. ಯುವ ಪ್ರತಿಭೆಗಳ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಬಿ.ಐ. ಈಳಗೇರ, ಎನ್. ರಾಜೇಶ್ವರಿ ಸುಳ್ಯ ಹಾಗೂ ವಿಜಯೇಂದ್ರ ಅರ್ಚಕ್ ಭಾಗವಹಿಸಿದ್ದರು. ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಾಲ, ಕಿಶೋರ ಮತ್ತು ಯುವ ಪ್ರತಿಭೆಗಳ ಚಿತ್ರಕಲಾ ಸ್ಪರ್ಧೆಗಳು ಜರುಗಿದವು.
ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಬಾಲ ಪ್ರತಿಭೆಗಳ ಶಾಸ್ತ್ರೀಯ ನೃತ್ಯ ಸ್ಪರ್ಧೆಗಳು ಜರುಗಿದವು. ಬಾಲ ಪ್ರತಿಭೆಗಳ ಶಾಸ್ತ್ರೀಯ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಮಧುರಾ ಗಾವಡೆ, ಮಾಧವಿ ಡಿ.ಕೆ ಹಾಗೂ ವಿದುಷಿ ಸವಿತಾ ಹೆಗಡೆ ಕಾರ್ಯನಿರ್ವಹಿಸಿದರು.



