ವಿಜಯಸಾಕ್ಷಿ ಸುದ್ದಿ, ಗದಗ: ಪಾರಂಪರಿಕ ಪ್ರವಾಸೋದ್ಯಮಕ್ಕೆ ಭವಿಷ್ಯದಲ್ಲಿ ವಿಫುಲ ಅವಕಾಶಗಳಿದ್ದು, ಯುವ ಸಮೂಹ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಇತಿಹಾಸ ತಜ್ಞ ಡಾ. ಬಾಲಕೃಷ್ಣ ಹೆಗಡೆ ಕರೆ ನೀಡಿದರು.
ಅವರು ಗದಗ ಸಹಕಾರಿ ಜವಳಿ ಗಿರಣಿಯ ಸ್ವತಂತ್ರ ಪೂರ್ವ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಗದುಗಿನ ಜಿಲ್ಲಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ `ಐತಿಹಾಸಿಕ ಪರಂಪರೆ ಉಳಿಸಿ’ ಹಾಗೂ ನಾಣ್ಯ-ನೋಟುಗಳು, ಅಂಚೆ ಚೀಟಿಗಳ ಪ್ರದರ್ಶನ, ಪ್ರಾಚ್ಯ ಸ್ಮಾರಕಗಳ ಪಿಪಿಟಿ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಿ.ಯು ವಿದ್ಯಾರ್ಥಿಗಳಿಗೆ ತಾವು ಮುಂದೆ ಏನು ಮಾಡಬೇಕೆಂದು ತೀರ್ಮಾನಿಸುವಲ್ಲಿ ಗೊಂದಲಕ್ಕೀಡಾಗುವುದು ಸಹಜ. ಇಂಥಹ ಸಂದರ್ಭದಲ್ಲಿ ತಜ್ಞರ, ಉಪನ್ಯಾಸಕರ ಸಲಹೆ, ಮಾರ್ಗದರ್ಶನ ಪಡೆದು ಎಚ್ಚರಿಕೆಯ ಹೆಜ್ಜೆ ಇಡುವುದು ಮುಖ್ಯವಾಗಿರುತ್ತದೆ. ಬದುಕಿನಲ್ಲಿ ಗೆಲ್ಲಲು ಕೆಲವು ಸಂಘರ್ಷಕ್ಕಿಂತಲೂ ಸಂಧಾನ ಮುಖ್ಯವಾಗಿದ್ದು, ಸಂಧಾನ ಯಾವತ್ತೂ ಸೋಲುವುದಿಲ್ಲ ಎಂದರು.
ಕೇಂದ್ರ ರಾಜ್ಯ ಸರ್ಕಾರಗಳು ಪಾರಂಪರಿಕ, ಸಾಂಸ್ಕೃತಿಕ ಪ್ರವಾಸೋದ್ಯಮಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿವೆ. ಆ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರಿಗೆ ತರಬೇತಿ, ಹಣಕಾಸಿನ ನೆರವು ಇತ್ಯಾದಿ ಸೌಲಭ್ಯಗಳನ್ನು ನೀಡುವುದರ ಮೂಲಕ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿವೆ. ಹಸ್ತಪ್ರತಿ, ತಾಳೆಗರಿ, ಮರದ ಮೇಲಿನ ಕೆತ್ತನೆ, ಬಟ್ಟೆಗಳ ಮೇಲಿನ ಬರಹ ಮೊದಲಾದವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ `ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ವಿಧೇಯಕ-2025’ನ್ನು ಮಂಡಿಸಲು ಸಜ್ಜಾಗಿರುವುದು ಸ್ವಾಗತಾರ್ಹ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಶೈಕ್ಷಣಿಕ ಸಲಹಾ ಸಮಿತಿಯ ಅಧ್ಯಕ್ಷ ಡಿ.ಬಿ. ಓದುಗೌಡರ್ ಮಾತನಾಡಿ, ಯಾವುದೇ ಕೆಲಸವನ್ನು ಗಟ್ಟಿ ನಿರ್ಧಾರದಿಂದ ಮಾಡಿದರೆ ಆ ಕೆಲಸ ಯಶಸ್ಸು ಕಾಣುತ್ತದೆ. ಐತಿಹಾಸಿಕ ಪರಂಪರೆಯನ್ನು ಉಳಿಸಿ, ಬೆಳೆಸಿ ಐತಿಹಾಸಿಕ ಸ್ಮಾರಕಗಳ ಮಹತ್ವವನ್ನು ಅರಿಯುವುದರ ಮೂಲಕ ವಿದ್ಯಾರ್ಥಿಗಳು ನಾಡಿನ ಭವ್ಯ ಪರಂಪರೆಗೆ ಮತ್ತು ಸಂಸ್ಕೃತಿಗೆ ಗೌರವ ತರಬೇಕು ಎಂದರು.
ಅಕಾಡೆಮಿಯ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಡಾ. ದತ್ತಪ್ರಸನ್ನ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿ, ಅಕಾಡೆಮಿಯು ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಇತಿಹಾಸ, ಸಂಸ್ಕೃತಿ, ಪರಂಪರೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪಿ.ಯು ಮಕ್ಕಳಲ್ಲಿ ಇತಿಹಾಸದಲ್ಲಿ ಆಸಕ್ತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದರ ಜೊತೆಗೆ ಕ್ಷೇತ್ರ ಕಾರ್ಯಕ್ಕೂ ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅಕಾಡೆಮಿ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಇತಿಹಾಸ ಸಂಶೋಧಕ ಡಾ. ಬಾಲಕೃಷ್ಣ ಹೆಗಡೆ, ಸಂಪನ್ಮೂಲ ವ್ಯಕ್ತಿಗಳಾದ ಡಾ. ವಾಯ್.ಆರ್. ಬೇಲೇರಿ, ಡಾ. ಎಸ್.ಎಂ. ಮಠ, ಡಾ. ದತ್ತಪ್ರಸನ್ನ ಪಾಟೀಲ, ಅಪ್ತಬ ಬೇಲೇರಿ, ಪ್ರೊ. ಕೆ.ಎಂ. ಗರಗ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿಯ ಜಿಲ್ಲಾಧ್ಯಕ್ಷ ಡಾ. ವೈ.ಆರ್. ಬೇಲೇರಿ, ಸಹ ಕಾರ್ಯದರ್ಶಿ ಡಾ. ಎಸ್.ಎಂ. ಮಠ, ಐತಿಹಾಸಿಕ ಪರಂಪರೆ ಉಳಿಸಿ ಹಾಗೂ ಐತಿಹಾಸಿಕ ಸ್ಮಾರಕಗಳ ಮಹತ್ವ ಕುರಿತು ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಅಂಚೆ ಚೀಟಿ ಪ್ರದರ್ಶಕ ಅಪ್ತಾಬ ಬೇಲೇರಿ ಅಪರೂಪದ ನಾಣ್ಯ ನೋಟು, ಅಂಚೆ ಚೀಟಿಗಳ ಪ್ರದರ್ಶನದ ವಿಶೇಷತೆ ವಿವರಿಸಿದರು.
ಅಕಾಡೆಮಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಂ. ಗರಗ ಸ್ವಾಗತಿಸಿದರು. ಪ್ರೊ. ರಾಮಚಂದ್ರ ಮಿಟ್ಟಿಮನಿ, ಉಪನ್ಯಾಸಕರಾದ ಕೃಷ್ಣ ರವಳೊಜಿ, ಮಹಾಲಕ್ಷ್ಮಿ ಹಿರೇಮಠ, ಸಚಿನ್ ಸತ್ಯರಡ್ಡಿ, ಮಲ್ಲಿಕಾರ್ಜುನ ಬಾಲಪ್ಪನವರ್, ವಿದ್ಯಾರ್ಥಿ ಮುಖಂಡರಾದ ದಿವ್ಯಾ ಅಗಸನಕೊಪ್ಪ, ಗಣೇಶ್ ಬ್ಯಾಡಗಿ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ ಮಾತನಾಡಿ, ವಿದ್ಯಾರ್ಥಿಗಳು ಪ್ರಜ್ಞೆ ಮತ್ತು ಪರಿಸರವನ್ನು ಮನಗಂಡು ಕಾರ್ಯೋನ್ಮುಖರಾಗಬೇಕು. ಇತಿಹಾಸ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಪರಿಜ್ಞಾನ ಹೊಂದಿರಬೇಕು. ಈಗ ಬರೆದಿರುವ ಇತಿಹಾಸ ಪುಸ್ತಕಗಳಲ್ಲಿ ಅನೇಕ ತಪ್ಪುಗಳಿವೆ. ಪಾಠ ಮಾಡುವಾಗ ಅವುಗಳನ್ನು ಸರಿಪಡಿಸಿಕೊಂಡು ಇತಿಹಾಸದ ಸತ್ಯವನ್ನೇ ಮಕ್ಕಳಿಗೆ ತಿಳಿಸಬೇಕು ಎಂದು ಅಭಿಪ್ರಾಯಪಟ್ಟರು.



