ವಿಜಯಸಾಕ್ಷಿ ಸುದ್ದಿ, ಗದಗ
ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಸಿದ್ದಪ್ಪ ಎಚ್.ಕಿಲ್ಲೇರ ಅವರ ನಿರ್ದೇಶನದನ್ವಯ ವಿಶೇಷ ತಂಡವನ್ನು ರಚಿಸಿ ಗದಗ ಜಿಲ್ಲೆಯಲ್ಲಿರುವ ಶಾಲಾ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ ಹಾಗೂ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಅರುಣ ಕಟ್ಟಿಮನಿ, ಬಾಲಚಂದ್ರ ತೊದಲಬಾಗಿ ಅವರ ನೇತೃತ್ವದಲ್ಲಿ ವಿಶೇಷ ತಪಾಸಣೆ ನಡೆಸಿ ಡಿ. 18ರಿಂದ 31 ವಾಹನಗಳನ್ನು ತಪಾಸಣೆ ನಡೆಸಲಾಯಿತು.
ರಹದಾರಿ ಉಲ್ಲಂಘನೆ ಮಾಡಿದ 7 ಶಾಲಾ ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇತರೆ ಶಾಲಾ ವಾಹನಗಳಿಗೆ ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನವೀಕರಿಸಿಕೊಳ್ಳಲು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಲು ವಾಹನ ಚಾಲಕರಿಗೆ ಹಾಗೂ ಸಹ ಚಾಲಕರಿಗೆ ತಿಳುವಳಿಕೆ ನೀಡಲಾಯಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.




