ನವದೆಹಲಿ:- ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ ಎಂದು ಹೇಳುವ ಮೂಲಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ರಾಷ್ಟ್ರ ಮಾಡುವ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ ಎನ್ನುವುದು ಅಷ್ಟೇ ಸತ್ಯ. ಆರ್ಎಸ್ಎಸ್ ಸಂವಿಧಾನಿಕ ಚೌಕಟ್ಟಿನೊಳಗೆ ನೋಂದಾಯಿತ ಸಂಸ್ಥೆಯೇ ಅಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ನೋಂದಾಯಿಸದೇ ಇರುವವರು ಸಂಸತ್ತಿನ ಬಗ್ಗೆ ಮಾತನಾಡುವ ಹಕ್ಕು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಹಿಂದೂ ರಾಷ್ಟ್ರ ಮಾಡಲು ಸಂವಿಧಾನ ಬದಲಾವಣೆ ಅಗತ್ಯವಿಲ್ಲ ಎಂಬ ಹೇಳಿಕೆ ಅಸಂಬದ್ಧವಾಗಿದೆ. ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ಹಾಗೂ ಗೃಹ ಸಚಿವರು ಮೋಹನ್ ಭಾಗವತ್ ಅವರ ಏಜೆಂಟ್ಗಳೇ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು. ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಸಂವಿಧಾನಕ್ಕೇ ಬದ್ಧರಾಗಿರಬೇಕು. ಮೋಹನ್ ಭಾಗವತ್ಗೆ Z+ ಭದ್ರತೆ ನೀಡಲಾಗಿದೆ, ದೇಶಕ್ಕಾಗಿ ಅವರ ಕೊಡುಗೆ ಏನು ಎಂಬುದನ್ನು ಸರ್ಕಾರ ಹೇಳಬೇಕು ಎಂದು ಆಗ್ರಹಿಸಿದರು.



