ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತಾವು ಕಲಿಯದಿದ್ದರೂ ಗ್ರಾಮೀಣ ಭಾಗದ ಮಕ್ಕಳು ಚೆನ್ನಾಗಿ ಓದಿ, ಬರೆದು ಉತ್ತಮ ಭವಿಷ್ಯವನ್ನು ಹೊಂದಲಿ ಎಂಬ ಮಹದುದ್ದೇಶದಿಂದ ಸಮೀಪದ ನರೇಗಲ್ಲದ ಕೋಡಿಕೊಪ್ಪದ ವಿಶಾಲ ಜಾಗೆಯಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ತೆರೆಯುವ ಮೂಲಕ ಬೆತ್ತದ ಅಜ್ಜನವರು ಶೈಕ್ಷಣಿಕ ಕ್ರಾಂತಿಗೈದ ಮಹಾಪುರುಷರಾದರು. ಈ ಸಂಸ್ಥೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಬೆಳಗಿಸಿಕೊಂಡರು. ಅಂತಹ ಮಹನೀಯರ ಚಲನಚಿತ್ರಕ್ಕೆ ಇಂದು ಮುಹೂರ್ತ ಕೂಡಿ ಬಂದಿರುವುದು ನಮಗೆ ಅತ್ಯಂತ ಸಂತಸವನ್ನು ಂಟು ಮಾಡಿದೆ. ಈ ಚಿತ್ರ ಶೀಘ್ರವೇ ಚಿತ್ರೀಕರಣ ಪೂರೈಸಿ ನಮ್ಮ ಕಣ್ಣ ಮುಂದೆ ಪ್ರದರ್ಶನಗೊಳ್ಳಲಿ ಎಂದು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಜರುಗುತ್ತಿರುವ ಶ್ರೀ ಅನ್ನದಾನೇಶ್ವರರ 175ನೇ ಜಾತ್ರಾಮಹೋತ್ಸವದಲ್ಲಿ `ಬೆತ್ತದ ಅಜ್ಜ’ ಚಲನಚಿತ್ರದ ಚಿತ್ರೀಕರಣಕ್ಕೆ ಕ್ಲಾಪ್ ಮಾಡಿ ಅವರು ಆಶೀರ್ವಚನ ನೀಡಿದರು.
ಬೆತ್ತದ ಅಜ್ಜನವರು ಕಟ್ಟಿರುವ ಕಟ್ಟಡಗಳನ್ನು ನೀವೊಮ್ಮೆ ನೋಡಬೇಕು. ಯಾವ ಇಂಜಿನಿಯರರೂ ತಲೆ ಬಾಗುವಂತೆ ನಿಖರವಾದ ಅಳತೆ ಹಾಕಿ ಕಟ್ಟಡ ನಿರ್ಮಿಸಿರುವುದು ಅವರ ಜ್ಞಾನ ಕ್ಷಿತಿಜದ ಪರಿಚಯ ಮಾಡಿಕೊಡುತ್ತದೆ. ಶ್ರೀ ಅನ್ನದಾನ ವಿಜಯ ಬಾಲಕರ ಪ್ರೌಢಶಾಲಾ ಕಟ್ಟಡ, ವಸತಿ ನಿಲಯ ಮತ್ತು ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಕಟ್ಟಡಗಳನ್ನು ನೋಡಿದರೆ ಅಜ್ಜನವರ ಅಗಾಧ ಜ್ಞಾನಕ್ಕೆ ನಾವೆಲ್ಲರೂ ತಲೆದೂಗಲೇಬೇಕಾಗುತ್ತದೆ. ಅವರ ಕೈಯಲ್ಲಿನ ಬೆತ್ತವೇ ಅವರ ಅಳತೆ ಪಟ್ಟಿಯಾಗಿತ್ತು. ಅದರಿಂದ ಗುರುತು ಮಾಡಿದರೆ ಇದು ಇಷ್ಟೇ ಅಳತೆ, ಇಷ್ಟೇ ಉದ್ದ-ಅಗಲವಿದೆ ಎಂಬುದನ್ನು ನಿಖರವಾಗಿ ಹೇಳುತ್ತಿದ್ದರು ಎಂಬುದನ್ನು ಕೇಳಿದಾಗ ಅವರು ಅದೆಂತಹ ಮೇಧಾವಿಯಾಗಿದ್ದರು ಎಂಬುದು ತಿಳಿದು ಬರುತ್ತದೆ ಎಂದರು.
ಈವೇಳೆ ನಾಡಿನ ಹರ-ಗುರು-ಚರ ಮೂರ್ತಿಗಳು, ಶ್ರೀಮಠದ ಗಣ್ಯರು, ತಂತ್ರಜ್ಞರು, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಇಂತಹ ಮಹಾಮಹಿಮನ ಚಿತ್ರವನ್ನು ನೋಡಲು ನಾವು ತುದಿಗಾಲಲ್ಲಿ ನಿಂತಿದ್ದೇವೆ. ಅವರ ಆಶೀರ್ವಾದದ ಬಲದಿಂದ ಈ ಚಿತ್ರವು ಚೆನ್ನಾಗಿ ಮೂಡಿ ಬರುತ್ತದೆ ಎನ್ನುವ ವಿಶ್ವಾಸ ನಮ್ಮದು. ಈ ಚಿತ್ರದಲ್ಲಿ ಅಭಿನಯಿಸುವ ಎಲ್ಲ ಕಲಾವಿದರಿಗೆ, ತಂತ್ರಜ್ಞರಿಗೆ ಶ್ರೀ ಮಠದಿಂದ, ನಮ್ಮ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಶಿಕ್ಷಕ ಬಳಗ ಮತ್ತು ವಿದ್ಯಾರ್ಥಿ ಬಳಗದಿಂದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ ಎಂದು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.



