ವಿಜಯಸಾಕ್ಷಿ ಸುದ್ದಿ, ಗದಗ: ಚಿಕೇನಕೊಪ್ಪ ಚನ್ನವೀರಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭವು ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಸನ್ನಿಧಾನ ವಹಿಸಿದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಆಶೀರ್ವಚನ ನೀಡಿ, ಮಠಗಳು, ಜಾತ್ರೆ, ಪುಣ್ಯಸ್ಮರಣೆ ಮೊದಲಾದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ಕಾರ್ಯ ಮಾಡಿ ಜನಕಲ್ಯಾಣ ಮಾಡುವುದರ ಜೊತೆಗೆ ನಿರಂತರವಾಗಿ ಜ್ಞಾನದಾಸೋಹ, ಅನ್ನದಾಸೋಹ, ಸಾಮೂಹಿಕ ವಿವಾಹ ಮೊದಲಾದ ಚಟುವಟಿಕೆಗಳು ಸುಗಮವಾಗಿ ನಿರ್ವಹಣೆಯಾಗಲು ಪೂಜ್ಯ ಚನ್ನವೀರ ಶರಣರ ಆಶೀರ್ವಾದ ಹಾಗೂ ಭಕ್ತರ ನಿಷ್ಕಲ್ಮಷ ಭಕ್ತಿ, ವಿಶ್ವಾಸ, ಪ್ರೀತಿ ಸಮರ್ಪಣಾ ಭಾವದ ಸೇವೆ ಮುಖ್ಯವಾಗಿದೆ. ಈ ಪವಿತ್ರ ಕಾರ್ಯದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಿ.ಪಂ ಮಾಜಿ ಅಧ್ಯಕ್ಷ ಪಿ.ವಾಯ್. ಹುಣಸಿಕಟ್ಟಿ, ಜಿ.ಆರ್. ಓದುಗೌಡರ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜು ಗುಡಿಮನಿ, ಎಸ್.ಎಫ್. ಗದ್ದಿಕೇರಿ, ವ್ಹಿ.ಬಿ. ಪೊಲೀಸ್ಪಾಟೀಲ, ರಾಜೇಂದ್ರಗೌಡ ಕಾಶಿಗೌಡ್ರ, ಡಾ. ಶರಣಬಸವ ವೆಂಕಟಾಪುರ ಮುಂದಿನ ತಿಂಗಳು ಜರುಗುವ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಲು ತಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಪ್ರಕಟವಾದ 2026ರ ದಿನದರ್ಶಿಕೆ ಲೋಕಾರ್ಪಣೆಗೊಳಿಸಲಾಯಿತು.
ತಾ.ಪಂ ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ, ಎಂ.ಬಿ. ಸಿಕ್ಕೆದೇಸಾಯಿ, ಪುಂಡಲೀಕಪ್ಪ ಕಂಬಿ, ವಸಂತ ಮೇಟಿ, ಕೆ.ಪಿ. ಪಾಟೀಲ, ಎಸ್.ಪಿ. ಪಾಟೀಲ, ಎಸ್.ಎಸ್. ಪಾಟೀಲ (ಅರಹುಣಸಿ), ಅಶೋಕ ಸಂಕಣ್ಣವರ, ಮಹಾದೇವಪ್ಪ ಗೌರಿಪುರ, ಬಸವರಾಜ ಉಮಚಗಿ, ಶಶಿಧರ ಗೂಳರಡ್ಡಿ, ಪ್ರವೀಣಗೌಡ ಪಾಟೀಲ, ಪಂಚಾಕ್ಷರಯ್ಯ ಹಿರೇಮಠ, ವ್ಹಿ.ಸಿ. ಬಳ್ಳೊಳ್ಳಿ, ಈರಣ್ಣ ಕುರಡಗಿ, ಕೊಟ್ರೇಶ ವಡಕಣ್ಣವರ ಮೊದಲಾದವರು ಉಪಸ್ಥಿತರಿದ್ದರು.
ಹುಬ್ಬಳ್ಳಿ ನವನಗರದ ಚಿ.ಚ. ಶರಣರ ಅಂಧರ ಕಲ್ಯಾಣಾಶ್ರಮದ ಶಿಕ್ಷಕ ವೇ.ಮೂ. ಶಂಕರಯ್ಯ ಗುರುಮಠ ಪ್ರಾರ್ಥಿಸಿದರು. ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು. ಪ್ರಾಚಾರ್ಯ ಪ್ರಕಾಶ ಬರದೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ವಾಯ್. ಡೊಳ್ಳಿನ ನಿರೂಪಿಸಿದರು. ಮಾರುತಿ ಹುಡೇದ ವಂದಿಸಿದರು.



