ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳು ಶೈಕ್ಷಣಿಕವಾಗಿ ಮಕ್ಕಳಲ್ಲಿಯ ಕಲಾ ಸಂಪತ್ತು ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ. ಮಗು ಯಾವುದಾದರೊಂದು ಪ್ರತಿಭೆಯನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ. ಅವುಗಳ ವಿಕಾಸಕ್ಕೆ ಈ ವೇದಿಕೆಗಳು ಸೂಕ್ತವಾಗಿವೆ. ಆ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಶಿಕ್ಷಕರ ಕಾರ್ಯ ಬೆಲೆಯುಳ್ಳದ್ದಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ದೇವರೆಡ್ಡಿ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯಿತಿ ಗದಗ, ತಾಲೂಕು ಪಂಚಾಯಿತಿ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ಗದಗ ಹಾಗೂ ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಾವಿ ಸಹಯೋಗದಲ್ಲಿ ಬೆಳಧಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ.ರಾ.ಪ್ರಾ.ಶಾ.ಶಿ ಸಂಘದ ಗದಗ ಜಿಲ್ಲಾಧ್ಯಕ್ಷ ವಿ.ಎಮ್. ಹಿರೇಮಠ ಮಾತನಾಡಿ, ಪ್ರಸ್ತುತ ಶಿಕ್ಷಕರು ಹಲವು ಸವಾಲುಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಿಂದ ಕ್ಲಸ್ಟರ್ನ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಡಯಟ್ನ ಹಿರಿಯ ಉಪನ್ಯಾಸಕ ಕೊಟ್ರೇಶ ವಿಭೂತಿ, ಶಿಕ್ಷಣ ಸಂಯೋಜಕರಾದ ವ್ಹಿ.ಸಿ. ನರೇಗಲ್ಲಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರಿ ಪ್ರಧಾನ ಗುರುಗಳಾದ ಸುರೇಶ ದೊಡ್ಡಮನಿ ಸ್ವಾಗತಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಕನಕಪ್ಪ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಕ್ಷರ ದಾಸೋಹ ಗದಗ ಗ್ರಾಮೀಣ ವಲಯ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಉಪಸ್ಥಿತರಿದ್ದರು. ಶಿಕ್ಷಕರಾದ ವ್ಹಿ.ಎಸ್. ಹೊಸಳ್ಳಿ ಮತ್ತು ಅನ್ನಪೂರ್ಣ ಯಾಳವಾರವರನ್ನು ಸನ್ಮಾನಿಸಲಾಯಿತು.
ಸಹ ಶಿಕ್ಷಕರಾದ ಶಂಭುಗೌಡ ತಮ್ಮನಗೌಡರ ಪಾರಿತೋಷಕ ವಿತರಣೆಯ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ನಾಗಾವಿ ಗ್ರಾ.ಪಂ ಅಧ್ಯಕ್ಷ ಮುತ್ತಣ್ಣ ಶಿಗ್ಲಿ, ಶಶಿಧರ ಲಕ್ಷ್ಯಕೊಪ್ಪ, ಬಿ.ಬಿ. ಹಡಪದ, ಶಿವಾನಂದ ತಳವಾರ, ಮೋಹನ ಮೆಣಸಿನಕಾಯಿ, ಶಾಲಾ ಎಸ್.ಡಿ.ಎಮ್.ಸಿ ಸದಸ್ಯರಾದ ಪ್ರೇಮಾ ಮರಡ್ಡಿ, ಗೀತಾ ಕುಷ್ಟರೆಡ್ಡಿ, ಗಂಗಮ್ಮ ಛಲವಾದಿ, ಮಹಾದೇವಿ ಪಾಟೀಲ, ಸುಧಾ ಹಿಡ್ಕಿಮಠ್, ಶ್ರೀಮತಿ ಗೊರವರ, ಗ್ರಾ.ಪಂ ಸದಸ್ಯರಾದ ಹಜರತಸಾಬ್ ನದಾಫ್ ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ಮೋಹನ ಗೊಂದಿ ನಿರೂಪಿಸಿದರು. ಬಿ.ಆರ್.ಪಿ ಎಚ್.ಡಿ. ಕುರಿ ವಂದಿಸಿದರು.
ಗದಗ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವ್ಹಿ. ನಡುವಿನಮನಿ ಮಾತನಾಡಿ, ಗ್ರಾಮದ ಗುರು-ಹಿರಿಯರು ಶಾಲೆಗಳಲ್ಲಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಸದಾ ಬೆನ್ನೆಲುಬಾಗಿರುತ್ತಾರೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳು ಮಕ್ಕಳ ವಿಶೇಷ ಪ್ರತಿಭೆಯನ್ನು ಸಾಕಾರಗೊಳಿಸಲು ಸೂಕ್ತವಾದ ವೇದಿಕೆಯಾಗಿದೆ. ಎಲ್ಲ ಮಕ್ಕಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.



