ವಿಜಯಸಾಕ್ಷಿ ಸುದ್ದಿ, ಗದಗ: ಸರಕಾರ ರಾಜಕೀಯ ಸೋಗಲಾಡಿತನ ಬಿಟ್ಟು ಸಮಾಜದಲ್ಲಿ ಮರ್ಯಾದಾ ಹತ್ಯೆಯಂತಹ ಘೋರ ಕೃತ್ಯಗಳನ್ನು ತಡೆಯಲು ಕೂಡಲೇ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಒತ್ತಾಯಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರ್ಯಾದಾ ಹತ್ಯೆಗಳು ನಾಗರಿಕ ಸಮಾಜಕ್ಕೆ ಶಾಪವಾಗಿವೆ. ಇಂತಹ ಪ್ರಮಾದಗಳು ಮರುಕಳಿಸದಂತೆ ತಡೆಯುವುದೇ ನಾವು ಮಾನವೀಯತೆಗೆ ನೀಡುವ ನಿಜವಾದ ಗೌರವ. ಕೊಲೆ ಮಾಡಿದವರು ಮಾತ್ರವಲ್ಲದೆ, ಅಂತಹ ಕೃತ್ಯಕ್ಕೆ ಪ್ರಚೋದನೆ ನೀಡಿದವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಈ ನಾಡಿನ ಲಿಂಗಾಯತ ಸಮುದಾಯಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಪರಿಸರವನ್ನು ಜಾಗೃತವಾಗಿರಿಸಿಕೊಂಡು, ನಾಡನ್ನು ಶಾಂತಿಯ ತೋಟವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲ ಭೇದ-ಭಾವಗಳನ್ನು ಸುಡುವ ಶಕ್ತಿ ಇರುವುದು ಕೇವಲ ಪ್ರೀತಿ ಎಂಬ ಮಂತ್ರಕ್ಕೆ ಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಗರ್ಭಿಣಿ ಯುವತಿಯ ಮರ್ಯಾದಾ ಹತ್ಯೆ ಖಂಡಿಸಿ, ಜಾಗತಿಕ ಲಿಂಗಾಯತ ಮಹಾಸಭಾ, ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಜ. 2ರಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ವೃತ್ತದಲ್ಲಿ ಪ್ರಾಯಶ್ಚಿತ್ತ ದಿನ ಆಚರಿಸಲಾಗುವುದು. ಈ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಲಾಗುವುದು ಎಂದು ಬರಗುಂಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ಚಟ್ಟಿ, ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ಶ್ರೀದೇವಿ ಶೆಟ್ಟರ್, ಶರೀಫ್ ಬಿಳೆಯಲಿ, ಮುತ್ತು ಬಿಳೆಯಲಿ, ಮಾರ್ತಾಂಡ ಹಾದಿಮನಿ ಉಪಸ್ಥಿತರಿದ್ದರು.



