ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಂತರು, ಶರಣರು, ಮಹಾತ್ಮರ ಜೀವನ ಚರಿತ್ರೆ ಬದುಕಿಗೆ ದಾರಿದೀಪವಾಗಿದ್ದು, ಅವರ ಜೀವನ ವೃತ್ತಾಂತಗಳ ಪುರಾಣ-ಪ್ರವಚನಗಳನ್ನು ಶ್ರವಣ ಮಾಡುವ ಮೂಲಕ ಮನಸ್ಸಿನ ದುಃಖ-ದುಮ್ಮಾನಗಳು ಕಳೆದು ಮನಃಶಾಂತಿ, ನಿರ್ಮಲ ಶುದ್ಧ-ಪ್ರಸನ್ನಚಿತ್ತ ಮನಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಶ್ರೀಮಠದ 47ನೇ ಜಾತ್ರಾ ಮಹೋತ್ಸವ ಮತ್ತು ಲಿಂ. ನಿರಂಜನ ಶ್ರೀಗಳ ಪುಣ್ಯಾರಾಧನೆ ಅಂಗವಾಗಿ ಶ್ರೀ ಕೊಟ್ಟೂರು ಬಸವೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂತರ, ಶರಣರ, ಮಹಾತ್ಮರ ಚಿಂತನ-ಮಂಥನಗಳ ಸತ್ಸಂಗ ಕಾರ್ಯಕ್ರಮಗಳು ಜನರ ಮನಸ್ಸನ್ನು ಕಟ್ಟಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿವೆ. ಅಂತರಂಗದಲ್ಲಿ ಪ್ರೀತಿ, ದಯೆ, ಕರುಣೆ, ದಾನ, ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳು ಒಡಮೂಡಲು ಮಹಾತ್ಮರ ಜೀವನ ಚರಿತ್ರೆಯನ್ನು ಅರಿಯಬೇಕು. ಶ್ರೇಷ್ಠರಾದ ಮುಳುಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಚರಿತ್ರೆ ಸನ್ಮಾರ್ಗದ ದೀವಿಗೆಯಾಗಿದ್ದು, ಈ ಪುರಾಣ ಕಾರ್ಯದಲ್ಲಿ ಪಾಲ್ಗೊಂಡು ಕೆಲ ತತ್ವ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜ. 1ರಿಂದ ಪ್ರಾರಂಭಗೊಂಡಿರುವ ಪುರಾಣ ಪ್ರವಚನ ಕಾರ್ಯಕ್ರಮ ಜ. 13ರವರೆಗೆ ನಿತ್ಯ ಸಂಜೆ ಶ್ರೀಮಠದಲ್ಲಿ ನೆರವೇರಲಿದೆ. ಪ್ರವಚನಕಾರರಾಗಿ ರಾಚಯ್ಯ ಶಾಸ್ತಿಗಳು ಹಿರೇಮಠ, ನಿಂಗಯ್ಯ ಸ್ವಾಮಿ ಹಿರೇಮಠ ಮತ್ತು ಶಿವಕುಮಾರ ಸಂಗೀತ ಸೇವೆ ನೀಡುವರು. ಪುರಾಣ ಕಾರ್ಯಕ್ರಮದಲ್ಲಿ ಹೂವಿನಶಿಗ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮವ್ವ ಗಡ್ಡೆಣ್ಣವರ, ಉಪಾಧ್ಯಕ್ಷೆ ಚೈತ್ರಾ ಅತ್ತಿಗೇರಿ ಸೇರಿ ಸರ್ವ ಸದಸ್ಯರು, ಮಾಂತೇಶ ಹುಲ್ಲೂರ, ಶ್ರೀಮಠದ ಭಕ್ತರು ಇದ್ದರು.



