ವಿಜಯಸಾಕ್ಷಿ ಸುದ್ದಿ, ಗದಗ: ಗಾಣಿಗ ಸಮುದಾಯವು ಕಠಿಣ ಶ್ರಮ ಮತ್ತು ಸ್ವಾಭಿಮಾನದ ಗುಣಗಳನ್ನು ಹೊಂದಿದ್ದು, ಈ ಗುಣಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸಮಾಜಕ್ಕೆ ಕೀರ್ತಿ ತರುವ ಕೆಲಸವಾಗಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ ಹೇಳಿದರು.
ಇಲ್ಲಿನ ಹಾತಲಗೇರಿ ರಸ್ತೆಯ ವಿವೇಕಾನಂದ ನಗರದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರ 20 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಊಟದ ಕೊಠಡಿ, ಕಟ್ಟಡದ ಮೇಲ್ಛಾವಣಿಯಲ್ಲಿ ಅಳವಡಿಸಿರುವ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನೆ ಹಾಗೂ 2026ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಸಮಾಜದ ಭವನ ನೋಡಿದರೆ ಗಾಣಿಗ ಸಮಾಜದ ಭವನವನ್ನು ಸುಂದರವಾಗಿ ಹಾಗೂ ವಿಶಾಲವಾಗಿ ನಿರ್ಮಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಗಾಣಿಗ ಸಮುದಾಯ ಭವನವು ಮಾದರಿಯಾಗಿದೆ. ಈ ಭವನದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಸಲಹೆ ನೀಡಿದರು.
ಗಾಣಿಗ ಸಮಾಜವು ನಮ್ಮ ಕುಟುಂಬದ ಒಂದಿಗೆ ಹಿಂದಿನ ನಿಂದಲೂ ಅವಿನಾಭಾವ ಸಂಬಂಧ ಹೊಂದಿದೆ. ಗಾಣಿಗ ಸಮಾಜವು ನಮ್ಮ ಕೆಲಸಕ್ಕೆ ಹೆಗಲಿಗೆ ಹೆಗಲು ಕೊಟ್ಟು ಶಕ್ತಿ ತುಂಬುತ್ತದೆ. ನಮ್ಮ ಮನೆತನಕ್ಕೆ ರಾಜಕೀಯವಾಗಿ ಗಾಣಿಗ ಸಮಾಜವು ಶಕ್ತಿ ತುಂಬುತ್ತಾ ಬಂದಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಸಹ ಇದೇ ಬೆಂಬಲ ನನಗೆ ನೀಡುವಂತೆ ಕೃಷ್ಣಗೌಡ ಪಾಟೀಲ ಮನವಿ ಮಾಡಿದರು.
ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬಿಂಗಿ ಮಾತನಾಡಿ, ದಾನಿಗಳ ಸಹಕಾರದಿಂದ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿತ್ತು. ಶಾಸಕರ ಅನುದಾನದಲ್ಲಿ ಈ ಊಟದ ಮನೆ ನಿರ್ಮಾಣ ಮಾಡಲಾಗಿದೆ ಎಂದರು.
ಗಾಣಿಗ ಸಮಾಜದ ಮುಖಂಡ ದಶರಥ ಗಾಣಿಗೇರ ಮಾತನಾಡಿ, ಗಾಣಿಗ ಸಮಾಜದ ಒಗ್ಗಟ್ಟು ಹೆಚ್ಚಿನ ಪ್ರಮಾಣದಲ್ಲಿ ತೋರಿಸಬೇಕು. ಸಮಾಜವು ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲರೂ ಬದ್ಧರಾಗಿರಬೇಕು ಎಂದರು.
ಕೆಇಬಿ ಇಲಾಖೆಯ ಅಧಿಕಾರಿ ಜವಳಿ, ಸೋಲಾರ್ ಕಂಪನಿಯ ಮ್ಯಾನೇಜರ್ ಶ್ರೀನಿವಾಸ ಮಂಟೂರ ಮಾತನಾಡಿದರು. ಇದೇ ಸಂದರ್ಭದಲ್ಲಿ 2026ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಟ್ರಸ್ಟ್ನ ಷಣ್ಮುಖಪ್ಪ ಬಡ್ನಿ, ಬಿ.ಬಿ. ಐನಾಪೂರ, ಮುರುಘರಾಜೇಂದ್ರ ಬಡ್ನಿ, ಗಾಣಿಗ ಸಮಾಜದ ಮುಖಂಡ ಅಶೋಕ ಮಂದಾಲಿ, ಸುರೇಶ ಮರಳಪ್ಪನವರ, ಬಸವರಾಜ ಮೇಟಿ, ಗಿರಿಯಪ್ಪ ಅಸೂಟಿ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಹಾಲಪ್ಪ ಲಕ್ಕುಂಡಿ (ಬಣವಿ), ಫಕ್ಕೀರೇಶ ಸಿಂಧಗಿ, ಬಸವರಾಜ ಸುಂಕದ, ಶರಣಗೌಡ ಪವಾಡಿಗೌಡ್ರು, ಬಿ.ಎಸ್. ವಡವಟ್ಟಿ, ನಿಂಗಪ್ಪ ಕೆಂಗಾರ, ಅಮರೇಶ ಹಾದಿ, ಶ್ರೀಕಾಂತ ಲಕ್ಕುಂಡಿ, ಪ್ರಭುರಾಜ ಬಿಂಗಿ, ಹನಮಂತಗೌಡ ದೊಡ್ಡಗೌಡ್ರ, ಐ.ಎಂ. ಕಿರೇಸೂರ, ಬಸವಂತಪ್ಪ ನವಲಳ್ಳಿ, ಬಸವರಾಜ ನವಲಗುಂದ, ತೋಟಪ್ಪ ಗಾಣಿಗೇರ, ಶಿವಣ್ಣ ಹಿಟ್ಟಳ್ಳಿ, ಸೋಮನಗೌಡ ಪಾಟೀಲ, ಪ್ರಕಾಶ ಮುಧೋಳ, ಜಗದೀಶ ಬೆಳವಟಗಿ, ಪುಲಕೇಶಗೌಡ ಪಾಟೀಲ, ಸಂದೀಪ ಕಪ್ಪತ್ತನವರ, ಎಚ್.ಬಿ. ಕೊರಗಲ್ ಇದ್ದರು.
ಗಾಣಿಗ ಸಮಾಜವು ವೃತ್ತಿಯನ್ನು ಅವಲಂಬಿಸಿ ಉನ್ನತ ಮಟ್ಟಕ್ಕೇರಿದ ಸಮಾಜವಾಗಿದೆ. ಪರಿಶುದ್ಧ ಗಾಣದ ಎಣ್ಣೆಯನ್ನು ತೆಗೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜಕ್ಕೆ ಸಂಸ್ಕಾರ ಕಲಿಸುವ ಹಿರಿಯರನ್ನು ಕಡೆಗಣಿಸದೆ ಸದಾ ಗೌರವದಿಂದ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನ ಯುವ ಪೀಳಿಗೆಗೆ ಅಗತ್ಯ. ಬದುಕಿನಲ್ಲಿನ ನೋವು-ನಲಿವು ಕಂಡ ಹಿರಿಯರ ಅನುಭವದ ಮಾತುಗಳನ್ನು ಪಾಲಿಸಿದಲ್ಲಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂದು ಕೃಷ್ಣಗೌಡ ಪಾಟೀಲ ಹೇಳಿದರು.



