HomeGadag Newsಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್, ಮನೆಗಳ ಗೋಡೆ ಬಿರುಕು: ಸ್ಥಳೀಯರಿಂದ ಎಸ್‌ಪಿಗೆ ದೂರು

ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್, ಮನೆಗಳ ಗೋಡೆ ಬಿರುಕು: ಸ್ಥಳೀಯರಿಂದ ಎಸ್‌ಪಿಗೆ ದೂರು

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

‘ಪಟ್ಟಣದ ಸುತ್ತಮುತ್ತಲಿನ ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಇದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದರು.

ಮಂಗಳವಾರ ಶಿರಹಟ್ಟಿ ಪೊಲೀಸ್ ಠಾಣೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಸಾರ್ವಜನಿಕರ ಸಭೆಯಲ್ಲಿ ಅವರು ದೂರಿದರು.

ಪಟ್ಟಣದ ವಿದ್ಯಾನಗರ ಭಾಗದಲ್ಲಿ ಬರುವ ಕ್ರಷರ್‌ಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಸದ್ದು ಆಗುತ್ತಿದ್ದು, ಕ್ರಮೇಣ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಇದರಿಂದ ನಿತ್ಯವೂ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೇ, ಕ್ರಷರ್‌ಗಳಿಂದ ಮಿತಿಮೀರಿ ಜಲ್ಲಿ, ಎಂಸ್ಯಾಂಡ್ ಸಾಗಿಸುವ ಟಿಪ್ಪರ್‌ಗಳ ಹಾವಳಿ ಹೇಳತೀರದಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರು ‘ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಮಟ್ಟದ ಮುಖಂಡರು ಇನ್ನು ಮುಂದೆ ವಿವಿಧ ಅಪರಾಧ ಪ್ರಕರಣಗಳ ರಾಜಿ ಸಂಧಾನ ನಡೆಸುವುದು ಬೇಡ. ಪ್ರತಿ ಪ್ರಕರಣಗಳನ್ನು ಸ್ವತಃ ನಾವೇ ಇತ್ಯರ್ಥ ಪಡಿಸುತ್ತೇವೆ. ಇದಕ್ಕೆ ತಾವೆಲ್ಲರೂ ಸಹಕರಿಸಬೇಕು. ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡುವುದರಿಂದ ಅಪರಾಧಗಳಲ್ಲಿ ಭಾಗಿಯಾದವರು ಕೆಲವೇ ದಿನಗಳಲ್ಲಿ ತಮ್ಮ ಹಳೆಯ ಪ್ರವೃತ್ತಿಯನ್ನೇ ಮುಂದುವರಿಸುತ್ತಾರೆ. ಅಲ್ಲದೇ, ರಾಜಿ ಸಂಧಾನ ಮಾಡಿಸಿದವರ ಮಾತನ್ನೂ ಕೇಳುವುದಿಲ್ಲ.

ಹೀಗಾಗಿ ಇಂತಹ ಪ್ರಕ್ರಿಯೆಯನ್ನು ಕೈಬಿಡಬೇಕು. ಪ್ರತಿ ಹಳ್ಳಿಗೂ ಸಹ ಪೊಲೀಸ್ ಸಿಬ್ಬಂದಿ ಗಸ್ತು ಮಾಡಬೇಕು. ಗ್ರಾಮಗಳಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ಹೇಳಿದರು. ಈ ಸಂದರ್ಭದಲ್ಲಿ ಡಿ ಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ನವೀನ ಜಕ್ಕಲಿ ಇದ್ದರು.

ಸಭೆಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಮಾಬುಸಾಬ್ ಲಕ್ಷ್ಮೇಶ್ವರ, ಯಲ್ಲಪ್ಪಗೌಡ ಪಾಟೀಲ್, ಚಾಂದಸಾಬ ಮುಳಗುಂದ, ಬಸವಣ್ಣೆಪ್ಪ ತುಳಿ, ಬಸವರಾಜ ವಡವಿ, ಮುತ್ತುರಾಜ್ ಬಾವಿಮನಿ, ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!