ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸ್ ತನಿಖೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.
ಮೃತ ಶರ್ಮಿಳಾಳ ನೆರೆಮನೆಯವನಾಗಿರುವ 18 ವರ್ಷದ ಆರೋಪಿ ಕರ್ನಲ್, ಮೊದಲಿಗೆ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿಹಾಕಿದ್ದ. ಆದರೆ ವಿಚಾರಣೆ ವೇಳೆ, ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
34 ವರ್ಷದ ಟೆಕ್ಕಿ ಶರ್ಮಿಳಾಳನ್ನು ಪ್ರೀತಿಸುತ್ತಿದ್ದ ಆರೋಪಿ, ಒಂದುವರೆ ತಿಂಗಳಿಂದ ಪ್ರತಿದಿನವೂ ಟೆರಸ್ನಿಂದ ಆಕೆಯ ಚಲನ-ವಲನಗಳನ್ನು ಗಮನಿಸುತ್ತಿದ್ದ. ಶರ್ಮಿಳಾ ಕೆಲಸಕ್ಕೆ ಹೋಗುವಾಗ ಹಾಗೂ ಕೆಲಸ ಮುಗಿಸಿ ವಾಪಸ್ ಬರುವ ವೇಳೆಯಲ್ಲೂ ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜನವರಿ 3ರ ರಾತ್ರಿ ಆರೋಪಿ ಶರ್ಮಿಳಾ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಶರ್ಮಿಳಾ ಜೋರಾಗಿ ಕಿರುಚಿಕೊಂಡಾಗ, ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ. ಮಹಿಳೆ ಎಷ್ಟೇ ಬೇಡಿಕೊಂಡರೂ ಕನಿಕರವಿಲ್ಲದೆ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಮುಚ್ಚಿಹಾಕಲು ಟಿಶ್ಯು ಪೇಪರ್ನ್ನು ಹಾಸಿಗೆ ಮೇಲೆ ಇಟ್ಟು ಬೆಂಕಿ ಹಚ್ಚಿದ್ದಾನೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಾಲ್ಕನಿ ಡೋರ್ ಮೂಲಕ ಜಿಗಿದು ಆರೋಪಿ ಪರಾರಿಯಾಗಿದ್ದ. ಅಗ್ನಿ ಅವಘಡದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸ್ ವಿಚಾರಣೆಯಲ್ಲಿ ಆತನ ಸತ್ಯ ಹೊರಬಿದ್ದಿದೆ. ಸದ್ಯ ಮೃತರ ಪೋಸ್ಟ್ಮಾರ್ಟಮ್ ವರದಿ ಹಾಗೂ ಕೆಲವು ಮೆಡಿಕಲ್ ಸ್ಯಾಂಪಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ತನಿಖೆ ಮುಂದುವರಿದಿದೆ.



