*ವಿಡಿಯೋ ವೈರಲ್
ವಿಜಯಸಾಕ್ಷಿ ಸುದ್ದಿ, ಗದಗ:
‘ದವಾಖಾನಿ ಇದು, ಗಪ್ ನಿಲ್ಲು, ಇಲ್ಲ ಹೊರಗ್ ಬಾ…!’ ಮಗನ ಶವದ ಮುಂದೆ ಕಣ್ಣೀರು ಹಾಕುತ್ತಾ ನಿಂತಿದ್ದ ಸಂತೋಷನ ಅಮಾಯಕ ತಾಯಿಗೆ ಪೊಲೀಸರು ಈ ರೀತಿ ಬೆದರಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಮೃತ ಸಂತೋಷನದ್ದು ಸಹಜ ಸಾವಾಗಿದ್ದರೆ, ಪೊಲೀಸರು ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ತಾಯಿಯ ಜತೆಗೆ ದುರ್ವರ್ತನೆ ತೋರುತ್ತಿರಲಿಲ್ಲ. ಅಲ್ಲದೆ, ಪೊಲೀಸರ ಈ ನಡವಳಿಕೆ, ಸಂತೋಷ ಪೊಲೀಸರ ಹೊಡೆತದಿಂದಲೇ ಸತ್ತಿದ್ದಾನೆ ವಿನಾ ಹೃದಯಾಘಾತದಿಂದ ಅಲ್ಲ. ಸಂತೋಷನದು ಸಹಜ ಸಾವಲ್ಲ ಎಂಬುದನ್ನು ಸಾಕ್ಷೀಕರಿಸಿದಂತಿದೆ ಎಂದು ಮೂಲಗಳು ಹೇಳುತ್ತಿವೆ.
ಹೋದವನು ಬಂದಿದ್ದು ಹೆಣವಾಗಿ:
ಸಂತೋಷ ಕರ್ಕಿಕಟ್ಟಿ ನ. 4 ರಂದು ದೀಪಾವಳಿ ಅಮಾವಾಸ್ಯೆಯಂದು ತಾನೇ 112ಗೆ ಕರೆ ಮಾಡಿ ಅದೇ ವಾಹನದಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದ ಎನ್ನಲಾಗುತ್ತದೆ. ಹಾಗೆ ಹೋದವನು ಅರ್ಧ ಗಂಟೆಯಲ್ಲಿಯೇ ವಾಪಸ್ ಮನೆಗೆ ಬಂದಿದ್ದಾನೆ. ಬಂದ ಒಂದು ಗಂಟೆಯಲ್ಲಿ ಶಹರ ಠಾಣೆಯಿಂದ ಪೊಲೀಸರು ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತಾಡಿದ್ದು ಯಾರು ಅಂತ ಗೊತ್ತಾಗಿಲ್ಲ. ಸಂತೋಷ ಮಾತ್ರ ‘ಬಂದೆ ಸರ್’ ಅಂದವನೇ, ಮನೆಯಲ್ಲಿ ಪೊಲೀಸ್ ಸ್ಟೇಶನ್ಗೆ ಹೋಗಿ ಬರ್ತೀನಿ ಅಂತ ಹೇಳಿ ಹೋಗಿದ್ದಾನೆ.
ಮೊದಲ ಬಾರಿಗೆ ಹೋಗಿ ವಾಪಸ್ ಬಂದ ಸಂತೋಷ್, ಎರಡನೇ ಸಾರಿ ಆಚೆ ಹೋಗಿ ಮರಳಿ ಮನೆಗೆ ಬಂದಿದ್ದು ಮಾತ್ರ ಹೆಣವಾಗಿ! ಹಾಗಿದ್ದರೆ, ಪೊಲೀಸ್ ಠಾಣೆಗೆ ಬರುವಂತೆ ಸಂತೋಷನಿಗೆ ಕರೆ ಮಾಡಿದ್ದು ಯಾರು? ಅಲ್ಲದೆ, ಸಂತೋಷ ಪೊಲೀಸ್ ಠಾಣೆಗೆ ಬಂದಾಗ ಕರ್ತವ್ಯದಲ್ಲಿದ್ದವರು ಯಾರ್ಯಾರು? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರಿಸಬೇಕಾಗಿದೆ.
ಸಂತೋಷ್ ಶಹರ ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಅಲ್ಲಿದ್ದ ಸಾರ್ವಜನಿಕರು ಯಾರು? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರೇ ಹೇಳುವ ಹಾಗೆ, ಪಿಟ್ಸ್ ಅಥವಾ ಎದೆನೋವು ಕಾಣಿಸಿಕೊಂಡಾಗ ವಾಹನದಲ್ಲಿ ಜನರು ಎತ್ತಿ ಹಾಕಿದ್ದಾರೆ ಅಂತೆ. ಹಾಗಿದ್ದರೆ, ಆ ಜನ ಯಾರು?.
ಜೂಜಾಟದಲ್ಲಿ ಸಿಕ್ಕಿಬಿದ್ದವರು ಯಾರು?:
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ಠಾಣೆಗೆ ಕರೆ ತರಲಾಗಿತ್ತು ಅಂತೆ. ಈ ವೇಳೆ ಸಂತೋಷನಿಗೆ ಪೊಲೀಸರು ಹೊಡೆದಿದ್ದು, ಹೊಡೆತದ ರಭಸಕ್ಕೆ ಅಲ್ಲೇ ಕುಸಿದು ಬಿದ್ದ ಸಂತೋಷನನ್ನು ಅಲ್ಲಿಯೇ ಇದ್ದ ಇಸ್ಟೀಟು ಜೂಜುಕೋರರೇ ವಾಹನದಲ್ಲಿ ಎತ್ತಿ ಹಾಕಿದ್ದಾರೆ ಎನ್ನಲಾಗಿದೆ. ಅದಾಗಲೇ ಸಂತೋಷನ ಪ್ರಾಣಪಕ್ಷಿ ಹಾರಿ ಹೋಗಿತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇದನ್ನು ಕಣ್ಣಾರೇ ಕಂಡ ಇಸ್ಪೀಟು ಜೂಜಾಟದಲ್ಲಿ ಸಿಕ್ಕಿಬಿದ್ದವರ ಮೇಲೆ ಪ್ರಕರಣ ದಾಖಲಾಯಿತೇ? ಅಥವಾ ಪೊಲೀಸರೇ ಹೆದರಿ ಹಾಗೆ ಬಿಟ್ಟು ಕಳುಹಿಸಿದರೇ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಲಾಕಪ್ ಡೆತ್ ಸುದ್ದಿ ಹರಿದಾಡಿದ್ದು ಹೇಗೆ?:
ಠಾಣೆಯಲ್ಲಿ ನಡೆದ ಈ ಪ್ರಕರಣ ಅಷ್ಟು ಬೇಗ ಹೊರಬರುತ್ತಿರಲಿಲ್ಲ. ಸುಮಾರು ಕೇಸ್ಗಳು ಠಾಣೆಯಿಂದ ಆಚೆಗೆ ಬರೋದೇ ಇಲ್ಲ. ಹಾಗಿದ್ದರೆ ಈ ಪ್ರಕರಣ ಹರಡಲು ಅಂದು ಸಿಕ್ಕಿ ಬಿದ್ದಿದ್ದ ಜೂಜುಕೋರರು ಕಾರಣವಾದರೇ? ಸಂಜೆ ನಡೆದ ಈ ಘಟನೆ ಎರಡೇ ಗಂಟೆಯಲ್ಲಿ ಅವಳಿ ನಗರದ ತುಂಬೆಲ್ಲ ಲಾಕಪ್ ಡೆತ್ ಆಗಿದೆ ಎಂದು ಹರಡಿದ್ದು ಹೀಗೆ ಎಂಬ ಮಾಹಿತಿಯನ್ನು ಬಲ್ಲ ಮೂಲಗಳು ತಿಳಿಸಿವೆ.
ಇನ್ನಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಕಾಗಕ್ಕ, ಗುಬ್ಬಕ್ಕನ ಕಥೆ ಹೇಳಿದ ಶಹರ ಠಾಣೆಯ ಪೊಲೀಸರ ಬಗ್ಗೆ ಪ್ರಾಥಮಿಕ ತನಿಖೆಯಾದರೂ ಮಾಡಲು ಮುಂದಾಗ್ತಾರಾ? ಘಟನೆಗೆ ಕಾರಣವೆನ್ನಲಾಗುವ ಒಂದಿಬ್ಬರು ಪೊಲೀಸರ ರಕ್ಷಣೆ ಮಾಡ್ತಾರಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡಬೇಕಿದೆ.