ಚಿಕ್ಕಬಳ್ಳಾಪುರ: ಜೈಲಿಂದ ಬಿಡುಗಡೆ ಬಳಿಕ ಉಚ್ಛಾಟಿತ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು, ಸತ್ಯಕ್ಕೆ ಗೌರವ ಕೊಡ್ತೇನೆ, ನಾನು ಕಳ್ಳತನ ಮಾಡಿಲ್ಲ, ಕೊಲೆ ಮಾಡಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು.
ಶಿಡ್ಲಘಟ್ಟ ನನ್ನ ಕರ್ಮಭೂಮಿ ಎಂದು ಹೇಳಿದ ರಾಜೀವ್ ಗೌಡ, ಇಲ್ಲಿನ ಜನರಿಗಾಗಿ ಮಾಡಿದ ಹೋರಾಟ ಮತ್ತು ತ್ಯಾಗವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದ್ರೂ ಕೂಡ ಮುಂದಿನ ದಿನಗಳಲ್ಲಿಯೂ ಜನರಿಗಾಗಿ ಹೋರಾಟ ಮಾಡುತ್ತೇನೆ ಎಂದರು.
ಇನ್ನೂ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಗೌಡ, ತಾವು ಎಲ್ಲಿಯೂ ಕೂಡ ಪಕ್ಷದ ವಿಚಾರವಾಗಿ ಮಾತನಾಡಿಲ್ಲ ಎಂದು ಹೇಳಿದರು. ಈ ಕುರಿತು ಹೈಕಮ್ಯಾಂಡ್ ಬಳಿ ತೆರಳಿ ಮನವಿ ಮಾಡುವುದಾಗಿ ತಿಳಿಸಿದರು. ದೇವರು ಇದ್ದಾನೆ ಎಂದು ಹೇಳಿದ ರಾಜೀವ್ ಗೌಡ, ಅವರು ಮಾಡಿದ ಕರ್ಮವನ್ನು ಅವರು ಅನುಭವಿಸುತ್ತಾರೆ ಎಂದರು. ತಾವು ಅನುಭವಿಸಿದ ನೋವನ್ನು ಪಿತೂರಿ ಮಾಡಿದವರು ಅನುಭವಿಸುತ್ತಾರೆ ಎಂದು ಹೇಳಿದರು.
ಪೌರಾಯುಕ್ತೆ ಬೆದರಿಕೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ತಾವು ಮಾತನಾಡಿದ್ದು ಬೇರೆ ಉದ್ದೇಶದಿಂದ, ಆದರೆ ಅದನ್ನು ಬೇರೆ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ ಎಂದರು. ಕಾರಣಾಂತರಗಳಿಂದ ಆ ರೀತಿಯಲ್ಲಿ ಆಗಿದೆ ಎಂದು ಹೇಳಿದರು. ಪೌರಾಯುಕ್ತೆಯೊಂದಿಗೆ ನಡೆದ ಮಾತುಕತೆ ವೈಯಕ್ತಿಕ ಉದ್ದೇಶದಿಂದಲ್ಲ, ಸಂಪೂರ್ಣವಾಗಿ ಜನರಿಗಾಗಿ ಎಂದು ಸ್ಪಷ್ಟಪಡಿಸಿದರು.



