ಬೆಂಗಳೂರು: ವಿಬಿ ಜಿ ರಾಮ್ ಜಿಯಲ್ಲಿ ರಾಮನ ಉದ್ಭವವನ್ನು ಕಾಂಗ್ರೆಸ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸ್ಸಿಗೆ ಸಹಜವಾದುದು. ಇದನ್ನು ವಿರೋಧಿಸಲೇಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೋಡಿಸಿದ್ದಲ್ಲ; ವಿಕಸಿತ ಭಾರತ ಗ್ಯಾರಂಟಿ ರೋಜ್ಗಾರ್ ಅಜೀವಿಕಾ ಮಿಷನ್ ಎಂಬುದು ರಾಮ್ ಎಂದು ಬಂದಿದೆ. ಯೋಜನೆಯಲ್ಲಿ ಇದೊಂದು ರೀತಿಯ ರಾಮೋದ್ಭವ ಆಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಸದನ ಕರೆಯುವ ಅವಶ್ಯಕತೆ ಇರಲಿಲ್ಲ ಎಂದ ಅವರು, ನರೇಗಾ ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಕಾಯ್ದೆಯನ್ನಾಗಿ ಮಾಡಿ ಕೇಂದ್ರ ಸರಕಾರ ಜಾರಿಗೊಳಿಸಿದ ‘ವಿಬಿ ಜಿ ರಾಮ್ ಜಿ’ ಅಡಿಯಲ್ಲಿ 100 ದಿನಗಳ ಬದಲು 125 ದಿನ ಕೆಲಸ ನೀಡಲಾಗುತ್ತಿದೆ.
ಜನರೇ ಕೆಲಸ ಮಾಡಬೇಕು. ಬಯೋಮೆಟ್ರಿಕ್ನಲ್ಲಿ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೇ ನೀಡುವ ಯೋಜನೆ ಇದಾಗಿದೆ. ಯಂತ್ರಗಳಿಂದ ಕೆಲಸ ಮಾಡಬಾರದು; ಜನರೇ ಕೆಲಸ ಮಾಡಿ, ಗ್ರಾಮೀಣ ಜನರ ಬದುಕು ಕಟ್ಟಿಕೊಡುವ ಯೋಜನೆ ಇದೆಂದು ವಿಶ್ಲೇಷಿಸಿದರು.
ಇದರ ಮೂಲಕ ಆಸ್ತಿ ನಿರ್ಮಾಣದ ಉದ್ದೇಶ ಇದೆ. ಆದರೆ, ಕಾಂಗ್ರೆಸ್ಸಿಗೆ ಅದು ಬೇಕಾಗಿರಲಿಲ್ಲ. ‘ವಿಬಿ ಜಿ ರಾಮ್ ಜಿ’ ಎಂದರೆ ರಾಮನ ಹೆಸರನ್ನು ಇದಕ್ಕೆ ಇಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಅಂದುಕೊಂಡಿದ್ದಾರೆ. ನರೇಗಾಗೆ ಮೊದಲು ನೆಹರೂ ಅವರ ಹೆಸರು ಇಡಲಾಗಿತ್ತು. ರೋಜ್ಗಾರ್ ಯೋಜನೆ ಎಂದಷ್ಟೇ ಕರೆಯಲಾಗಿತ್ತು. ಇವೆಲ್ಲ ಬಿಟ್ಟು ಕೊನೆಯಲ್ಲಿ ಮಹಾತ್ಮ ಗಾಂಧಿ ಎಂದು ಹೆಸರು ಜೋಡಿಸಿದ್ದರು ಎಂದು ವಿವರಿಸಿದರು.



