ದೇವನಹಳ್ಳಿ: ಪ್ರಿಯಕರನಿಗಾಗಿ ಹೆಂಡತಿಯೇ ತನ್ನ ಪತಿಯನ್ನು ಹತ್ಯೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣವನ್ನು ಸೂಲಿಬೆಲೆ ಪೊಲೀಸರು ಬಯಲಿಗೆಳೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಜನವರಿ 24ರಂದು ನಡೆದ ಅಶೋಕ್ (40) ಹತ್ಯೆಯ ರಹಸ್ಯ ಇದೀಗ ಬಹಿರಂಗವಾಗಿದೆ.
ಮೃತನ ಪತ್ನಿ ಪುಷ್ಪಾ ಹಾಗೂ ಆಕೆಯ ಪ್ರಿಯಕರ ದೇವರಾಜ್ ಅವರನ್ನು ಪೊಲೀಸರು ಬಂಧಿಸಿದ್ದು, ಇವರ ಜೊತೆಗೆ ಸಹಚರರಾದ ಮುನಿಂದ್ರ ಮತ್ತು ಸಿದ್ದಪ್ಪನನ್ನೂ ವಶಕ್ಕೆ ಪಡೆಯಲಾಗಿದೆ. ಲವರ್ ದೇವರಾಜ್ಗಾಗಿ ಪುಷ್ಪಾ ಪೂರ್ವಯೋಜಿತವಾಗಿ ಪತಿ ಅಶೋಕ್ನ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 24ರಂದು ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಅಶೋಕ್ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದು ರಸ್ತೆ ಅಪಘಾತವೆಂದು ಹೇಳಲಾಗಿತ್ತು. ಆದರೆ ಘಟನೆಯ ಸನ್ನಿವೇಶಗಳು ಸಂಶಯ ಹುಟ್ಟಿಸಿದ್ದರಿಂದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದ ಸೂಲಿಬೆಲೆ ಪೊಲೀಸರು ಇದು ಕೊಲೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರ ಪ್ರಕಾರ, ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಅಶೋಕ್ರನ್ನು ಕರೆದುಕೊಂಡು ಹೋಗಿ, ಕೆರೆಯ ಬಳಿ ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಬಳಿಕ ಶವವನ್ನು ರಸ್ತೆಯ ತಿರುವಿನಲ್ಲಿ ಬಿಸಾಡಿ ಅಪಘಾತದಂತೆ ಬಿಂಬಿಸಲು ಯತ್ನಿಸಲಾಗಿದೆ.
ಪ್ರಕರಣದ ಬಳಿಕ ಪತ್ನಿ ಹಾಗೂ ಪ್ರಿಯಕರ ಅನುಮಾನ ತಪ್ಪಿಸಲು ಹೈಡ್ರಾಮಾ ನಡೆಸಿದ್ದರು ಎನ್ನಲಾಗಿದೆ. ಸದ್ಯ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರ ವಿಚಾರಣೆ ಮುಂದುವರೆದಿದೆ.



