ವಿಜಯಸಾಕ್ಷಿ ಸುದ್ದಿ, ಗದಗ:
ಬೆಳ್ಳಂಬೆಳಗ್ಗೆ ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ತಲಾಶ್ ನಡೆಸಿದ್ದಾರೆ.
ಮಂಗಳವಾರ (ನ.23) ಮಧ್ಯಾಹ್ನವೇ ಗದಗ ನಗರದಲ್ಲಿ ಬೀಡು ಬಿಟ್ಟಿದ್ದ ಎಸಿಬಿ ಅಧಿಕಾರಿಗಳು ಇಂದು ಮುಂಜಾವಿನಲ್ಲಿ ನಗರದ ಹುಡ್ಕೋ ಕಾಲನಿಯಲ್ಲಿರುವ ಅವರ ನಿವಾಸ ಹಾಗೂ ನೌಕರರ ಭವನದ ಪಕ್ಕವಿರುವ ಕೃಷಿ ಇಲಾಖೆಯ ಕಚೇರಿ ಮೇಲೆ ಹಾವೇರಿ ಎಸಿಬಿ ಇನ್ಸ್ ಪೆಕ್ಟರ್ ಬಸವರಾಜ್ ಬುದ್ನಿ ಹಾಗೂ ದಾವಣಗೆರೆ ಎಸಿಬಿ ಇನ್ಸ್ಪೆಕ್ಟರ್ ರವೀಂದ್ರ ಕುರಬಗಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ರುದ್ರೇಶಪ್ಪ ಟಿ. ಎಸ್. ಅವರಿಗೆ ಸಂಬಂಧಿಸಿದ ಗದಗ ನಗರ ಸೇರಿದಂತೆ ದಾವಣಗೆರೆಯ ಚೆಳ್ಳಕೆರೆಯಲ್ಲಿರುವ ನಿವಾಸ ಮತ್ತು ತೋಟ, ಶಿವಮೊಗ್ಗ ಚಾಲುಕ್ಯ ಬಡಾವಣೆ ಹಾಗೂ ಗೋಪಾಳದ ನಿವಾಸ, ಹಾವೇರಿ ಸೇರಿ ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಒಂದು ಇನ್ನೋವಾ ಕಾರು ಹಾಗೂ ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕವಾಗಿ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಶಂಕೆ ಇದ್ದು, ಅಧಿಕಾರಿಗಳು ಕಳೆದ ನಾಲ್ಕು ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿ ರುದ್ರೇಶಪ್ಪ ಅವರನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.