ವಿಜಯಸಾಕ್ಷಿ ಸುದ್ದಿ, ಗದಗ: ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲಕ್ಕುಂಡಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಲಕ್ಕುಂಡಿಯ ಗತವೈಭವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಆಶಿಸಿದರು.
ಲಕ್ಕುಂಡಿಯ ಚೌಕಿಮಠದ ಆವರಣದಲ್ಲಿ ಶುಕ್ರವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಗದಗ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ಪಂಚ ದೇವಾಲಯಗಳು ಮತ್ತು ಪಂಚ ಬಾವಿಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಗಣರಾಜ್ಯೋತ್ಸವ ದಿನಾಚರಣೆಯಂದು ನಾವು ಹೇಳಿದಂತೆ ಲಕ್ಕುಂಡಿಯ ಪಂಚದೇವಾಲಯ, ಪಂಚ ಬಾವಿ ಅನಾವರಣ ಮಾಡಿದ್ದೇವೆ. ಉತ್ಖನನ ಕಾರ್ಯದಲ್ಲಿ ಶಿಲ್ಪಕಲೆ, ಪ್ರಾಚ್ಯಾವಶೇಷಗಳನ್ನು ಹೊರತಂದು ಲಕ್ಕುಂಡಿಯ ಗತವೈಭವ ಮರುಕಳಿಸುವಂತಾಗಬೇಕು. ಈ ಉತ್ಖನನ ಕಾರ್ಯ ಕೇವಲ ಆ ಸ್ಥಳದಲ್ಲಿನ ಬಂಗಾರ ಗುರುತಿಸುವುದಕ್ಕಲ್ಲ. ಆದರೆ ಲಕ್ಕುಂಡಿಯಲ್ಲಿನ ಭವ್ಯ ಐತಿಹಾಸಿಕ, ಸಾಂಸ್ಕೃತಿಕ, ಶಿಲ್ಪಕಲೆಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿದೆ. ಇಲ್ಲಿನ 101 ಬಾವಿ ಹಾಗೂ 101 ದೇವಾಲಯಗಳನ್ನು ಗುರುತಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಸಿಕ್ಕಿರುವ ದೇವಾಲಯ, ಬಾವಿ ಪುನರುಜ್ಜೀವನ ನಡೆಸುತ್ತೇವೆ. ಈ ದೇವಾಲಯಗಳಿಗೆ ರಸ್ತೆ ಸಂಪರ್ಕ ಒದಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವಾಸ್ತವತೆಯನ್ನು ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಇತಿಹಾಸವನ್ನು ಹೆಕ್ಕಿ ತೆಗೆಯಲು ಸಹಕರಿಸಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪ್ರಾಧಿಕಾರದ ಕಚೇರಿಯಲ್ಲಿ ಒಂದು ರಜಿಸ್ಟರ್ ಹಾಗೂ ಕ್ಯಾಮರಾವನ್ನು ಇಡಲಾಗಿದ್ದು, ಗ್ರಾಮಸ್ಥರು, ಹಿರಿಯರು, ಅನುಭವಿಗಳು ಹೇಳುವ ಅಂಶಗಳನ್ನು ಇಲ್ಲಿ ದಾಖಲಿಸುವ ಕಾರ್ಯವಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಲಕ್ಕುಂಡಿಗೆ ಹೊಸ ಸ್ವರೂಪ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಅನುದಾನ ನೀಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರ ಸಹಕಾರವೂ ಸಹ ಇದೆ. ಎಂದೂ ಕಂಡರಿಯದ ಪ್ರಾಚ್ಯಾವಶೇಷದ ಉತ್ಖನನ ಕಾರ್ಯ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ಅ.ಧ. ಕಟ್ಟಿಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ, ತೇಜೇಶ್ವರ ಸೇರಿದಂತೆ ಗಣ್ಯರು, ಪ್ರಮುಖರು, ಗ್ರಾಮದ ಹಿರಿಯರು ಹಾಜರಿದ್ದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿದರು.
ವಿದ್ಯಾಶಂಕರಲಿಂಗ ದೇವಾಲಯ, ಸೋಮನಕಟ್ಟಿ ಸೋಮಲಿಂಗೇಶ್ವರ ದೇವಾಲಯ, ಚೌಕಿಮಠದ ಈಶ್ವರ ದೇವಾಲಯ, ಚೌಕಿಮಠದ ಅರ್ಧ ನಾರೀಶ್ವರ ದೇವಾಲಯ, ಕಪ್ಪಚರಮಠ ಮತ್ತು ಬಾವಿಗಳನ್ನು ಅನಾವರಣಗೊಳಿಸಲಾಯಿತು. ಅಂತೆಯೇ ಛಬ್ಬೇರ ಬಾವಿ, ಸಿದ್ದರಬಾವಿ, ಫಕ್ಕೀರಸ್ವಾಮಿ ಮಠದ ಬಾವಿ, ಚೌಕಿಮಠದ ಬಾವಿ, ಸೋಮನಕಟ್ಟಿ ಸೋಮಲಿಂಗೇಶ್ವರ ಬಾವಿಗಳನ್ನು ಅನಾವರಣಗೊಳಿಸಲಾಯಿತು.
“ಈ ಹಿಂದೆ ಲಕ್ಕುಂಡಿಯಲ್ಲಿ 10 ಪಲ್ಲಕ್ಕಿಗಳನ್ನು ತೆಗೆದುಕೊಂಡು ಲಕ್ಕುಂಡಿಯ ಪ್ರತಿ ಬೀದಿಗೆ ಬಂದಾಗ ನೀವು ನಿಮ್ಮ ಮನೆಯಲ್ಲಿನ ಶಿಲ್ಪ, ವಾಸ್ತು, ಮುತ್ತು, ಹವಳ, ಆಯುಧಗಳನ್ನು ನೀಡಿದ್ದೀರಿ. ಲಕ್ಕುಂಡಿಯ ಜನರು ವಿಶಾಲ ಮನೋಭಾವವುಳ್ಳವರು. ಲಕ್ಕುಂಡಿಯ ಪ್ರಜ್ವಲ ರಿತ್ತಿ ಕುಟುಂಬದವರ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಎಲ್ಲರೂ ಮೆಚ್ಚುವಂತಹದ್ದಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರಿತ್ತಿ ಕುಟುಂಬದವರನ್ನು ಅಭಿನಂದಿಸಿದ್ದಾರೆ”
– ಎಚ್.ಕೆ. ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು.



