ಯಾದಗಿರಿ: ಮನೆಯೊಳಗೆ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಘಟನೆ ಸುರಪುರ ತಾಲ್ಲೂಕಿನ ಯಾಳಗಿ ತಾಂಡಾದಲ್ಲಿ ನಡೆದಿದ್ದು, ಮೃತನನ್ನು ಲಕ್ಷ್ಮಣ ರಾಠೋಡ್ (20) ಎಂದು ಗುರುತಿಸಲಾಗಿದೆ.
ಮನೆಯವರು ಹೊರಗಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಲಕ್ಷ್ಮಣನ ಶವವನ್ನು ಮನೆಯೊಳಗಿನ ಪ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಆದರೆ, ಮೃತನ ಕೈಗಳನ್ನು ಹಗ್ಗದಿಂದ ಕಟ್ಟಲಾಗಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಸಾವಿನ ಹಿಂದೆ ಕೊಲೆ ನಡೆದಿದೆ ಎಂಬ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದು, ಯುವಕನನ್ನು ಕೊಲೆಗೈದು ನಂತರ ನೇಣು ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶವದ ಸ್ಥಿತಿ ನೋಡಿದಾಗ ಆತ್ಮಹತ್ಯೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಹುಣಸಗಿ ಸಿಪಿಐ ರವಿಕುಮಾರ್ ಹಾಗೂ ಪಿಎಸ್ಐ ಅಮೋಜ್ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಸಾಧ್ಯತೆ ಇದೆ.
ಯುವಕನ ಮನೆ ಎದುರು ಕುಟುಂಬಸ್ಥರ ಆಕ್ರಂದನ ಕಣ್ಣೀರಿನ ಕೋಲಾಹಲವಾಗಿ ಮಾರ್ಪಟ್ಟಿದ್ದು, ಗ್ರಾಮದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



