ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯ ವಿನೂತನ ಪರಿಕಲ್ಪನೆಯ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಫೆಬ್ರವರಿ 21 ಮತ್ತು 22ರಂದು ನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಂಗಣದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ.
“ಲೀಡರ್ಸ್ ಪ್ಲೇ.. ಫ್ರೆಂಡ್ಶಿಫ್ ವಿನ್” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಮೊದಲ ಆವೃತ್ತಿಯ ಟೂರ್ನಿಯ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅನಾವರಣಗೊಳಿಸಿದ್ದಾರೆ. ಟೂರ್ನಿಯಲ್ಲಿ ಜನಪ್ರತಿನಿಧಿಗಳು,
ಐಎಎಸ್-ಐಪಿಎಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್ವುಡ್ ತಾರೆಯರು ಹಾಗೂ ಪತ್ರಕರ್ತರು ಕ್ರೀಡಾ ಮನೋಭಾವದಿಂದ ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಹಲವಾರು ಗಣ್ಯರು ಪವರ್ ಪ್ಲೇ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.
ಟೂರ್ನಿಯಲ್ಲಿ ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಇನ್ಸ್ಪೈರ್ ಚಾಲೆಂಜರ್ಸ್, ದಿ ಕೆಫೆ ದಿವ್ಯಂ, ಎಟಿಎಸ್ ಅಟ್ಯಾಕರ್ಸ್, ಪ್ರೋ ವಿನ್ ಪ್ಯಾಂಥರ್ಸ್, ಎಸ್ಥೆಟಿಕ್ ಅಟ್ಯಾಕರ್ಸ್, ಟೆಲಿಕಾಂ ಸ್ಕೈ ಸ್ಟ್ರೈಕರ್ಸ್ ಹಾಗೂ ಕೆಜಿಎಫ್ ಸ್ಮಾಷರ್ಸ್ ತಂಡಗಳು ಸ್ಪರ್ಧಿಸಲಿವೆ.
ಲೀಗ್ ಮಾದರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಎ ಮತ್ತು ಬಿ ಗುಂಪುಗಳಾಗಿ ತಂಡಗಳನ್ನು ವಿಭಜಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ.
ಒಟ್ಟು 128 ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಕಳೆದ ಒಂದು ತಿಂಗಳಿನಿಂದ ಎಲ್ಲಾ ತಂಡಗಳು ಕಠಿಣ ಅಭ್ಯಾಸದಲ್ಲಿ ನಿರತರಾಗಿವೆ. ವಿನೂತನ ಮಾದರಿಯ ಈ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಬೆಂಗಳೂರು ಸಾಕ್ಷಿಯಾಗಲಿದೆ.



