ಬೆಂಗಳೂರು:- ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವ ವೇಳೆ ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಯಲಹಂಕ ಜುಡಿಷಿಯಲ್ ಲೇಔಟ್ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಲೋಕಾಯುಕ್ತ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಲಯದ ಆದೇಶದಂತೆ ಶಾಸಕ ಚಂದ್ರು ಲಮಾಣಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ. ಇದೇ ಪ್ರಕರಣದಲ್ಲಿ ಸರ್ಕಾರಿ ಪಿಎ ಮಂಜುನಾಥ್ ಹಾಗೂ ಸಂಬಂಧಿ ಗುರು ಲಮಾಣಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಡಿಯೋವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.
ಕಮಿಷನ್ ಕುರಿತು ಮಾತುಕತೆ ನಡೆಸಿದ ಆಡಿಯೋ ಸೇರಿದಂತೆ ಹಲವು ಮಹತ್ವದ ದಾಖಲೆಗಳು ತನಿಖಾಧಿಕಾರಿಗಳ ಕೈಗೆ ಸಿಕ್ಕಿವೆ. ಜುಲೈನಲ್ಲಿ ಮಂಜೂರಾಗಿದ್ದ ಟೆಂಡರ್ ಕಾಮಗಾರಿಗೆ ಒಂದೂವರೆ ತಿಂಗಳ ಹಿಂದೆ ಶಾಸಕರು ಚಾಲನೆ ನೀಡಿದ್ದರು. ಪೂಜೆ ದಿನವೇ ಹಣ ನೀಡುವ ಬಗ್ಗೆ ಮಾತುಕತೆ ನಡೆದಿದ್ದು, ಬಳಿಕ ಗುತ್ತಿಗೆದಾರ ವಿಜಯರಾಜ್ ಕರೆಗಳಿಗೆ ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಒಂದೂವರೆ ತಿಂಗಳ ನಂತರ ಗುತ್ತಿಗೆದಾರ ಶಾಸಕರನ್ನು ಭೇಟಿಯಾದಾಗ ಜೋರಾಗಿ ಮಾತಾಡಿರುವ ಹಾಗೂ ಬೆದರಿಕೆಯ ಧ್ವನಿಯ ಆಡಿಯೋವೂ ಲೋಕಾಯುಕ್ತಕ್ಕೆ ಲಭ್ಯವಾಗಿದೆ.
ವಿಚಾರಣೆ ವೇಳೆ ಶಾಸಕ ಚಂದ್ರು ಲಮಾಣಿ ತಾನು ಕಮಿಷನ್ ಪಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಹಣವನ್ನು ಪಿಎ ಗುರು ಪಡೆದಿದ್ದು, ಅದರಲ್ಲಿ ಒಂದು ಭಾಗವನ್ನು ಖರ್ಚಿಗಾಗಿ ಸರ್ಕಾರಿ ಪಿಎ ಮಂಜುನಾಥ್ಗೆ ನೀಡಿದ್ದಾನೆ ಎನ್ನಲಾಗಿದೆ. ಈ ನಡುವೆ ಆಸ್ಪತ್ರೆಗೆ ತೆರಳಲು ಸಿದ್ಧರಾಗಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೈ ತೊಳೆದಾಗ ಪಿಂಕ್ ಬಣ್ಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ಮತ್ತು ಪಿಎಗಳು ಬಂಧನಕ್ಕೊಳಗಾಗಿದ್ದಾರೆ.



