ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಪ್ರಸ್ತಾಪಿತ ನದಿ ತಿರುವು ಯೋಜನೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಂ ಕಟ್ಟಿ ಉತ್ತರ ಕರ್ನಾಟಕದ ಕಡೆಗೆ ನೀರು ಹರಿಸುವ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರದ ನಿರ್ಧಾರಕ್ಕೆ ತಜ್ಞರು ಪಶ್ಚಿಮಘಟ್ಟದ ನಾಶ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಮುರೆಗಾರ್ ಜಲಪಾತದಲ್ಲಿ ನದಿ ಪೂಜೆ ‘ಗಂಗಾರತಿ’ ನಡೆಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ.
**ಸ್ವರ್ಣವಲ್ಲಿ ಮಠ**ದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, “ನದಿಗಳು ಭಗವಂತನ ಇಚ್ಛೆಯಂತೆ ಹರಿಯುತ್ತಿವೆ. ಅವುಗಳ ದಿಕ್ಕು ಬದಲಿಸುವುದು ಅಧರ್ಮ. ಧರ್ಮಪೀಠ ಇದನ್ನು ವಿರೋಧಿಸುತ್ತದೆ” ಎಂದು ಹೇಳಿದರು. ಈ ಪೂಜೆ ಅಹಿಂಸಾತ್ಮಕ ಸತ್ಯಾಗ್ರಹವಾಗಿದ್ದು, ಮುಂದೆಯೂ ಪುನರಾವರ್ತನೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಜನವರಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದೀಗ ಸಹಿ ಸಂಗ್ರಹ ಚಳುವಳಿ ಆರಂಭಿಸಿ, ಸರ್ಕಾರಕ್ಕೆ ತಮ್ಮ ವಿರೋಧ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಅನಂತ್ ಹೆಗಡೆ ಅಶೀಸರ, ನೀರವಾರಿ ತಜ್ಞರೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಕುರಿತು ಚರ್ಚೆ ನಡೆಸುವ ಯೋಜನೆ ಇದೆ ಎಂದು ಹೇಳಿದ್ದಾರೆ.
ನದಿ ತಿರುವು ಯೋಜನೆ ವಿರುದ್ಧದ ಹೋರಾಟ ಇದೀಗ ಆಧ್ಯಾತ್ಮಿಕ ರೂಪ ಪಡೆದುಕೊಂಡಿದ್ದು, ಪರಿಸರ ರಕ್ಷಣೆ ಮತ್ತು ಜನಜಾಗೃತಿ ಎರಡನ್ನೂ ಒಟ್ಟಿಗೆ ಮುಂದುವರಿಸುವ ಸಂಕಲ್ಪ ವ್ಯಕ್ತವಾಗಿದೆ.



