ಬೇಸಿಗೆ ಕಾಲ ಆರಂಭವಾದರೆ ಹಾವುಗಳ ಕಾಟ ಹೆಚ್ಚಾಗುವುದು ಸಾಮಾನ್ಯ. ಬಿಸಿಲಿನ ತಾಪವನ್ನು ತಾಳಲಾರದೆ ಹಾವುಗಳು ತಮ್ಮ ಬಿಲಗಳಿಂದ ಹೊರಬಂದು ತಂಪಾದ ಸ್ಥಳಗಳನ್ನು ಹುಡುಕುತ್ತಾ ಮನೆಗಳ ಸುತ್ತಮುತ್ತ, ಪೊದೆಗಳು, ಮರಗಿಡಗಳ ಬಳಿ ಕಾಣಿಸಿಕೊಳ್ಳುತ್ತವೆ.
ಕೆಲವೊಮ್ಮೆ ಅವು ಮನೆಯೊಳಗೂ ಪ್ರವೇಶಿಸುವ ಅಪಾಯವಿರುತ್ತದೆ. ಹಾವು ಕಚ್ಚಿದರೆ ಪ್ರಾಣಾಪಾಯವೂ ಸಂಭವಿಸಬಹುದಾದ ಕಾರಣ, ಹಲವರು ಹಾವುಗಳನ್ನು ಕಂಡ ತಕ್ಷಣ ಭಯಭೀತರಾಗುತ್ತಾರೆ. ಅದಕ್ಕಾಗಿ ಹಾವುಗಳಿಂದ ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗುತ್ತದೆ.
ಈ ನಿಟ್ಟಿನಲ್ಲಿ ನೈಸರ್ಗಿಕ ಹಾಗೂ ಪರಿಣಾಮಕಾರಿ ಪರಿಹಾರವಾಗಿ ಸರ್ಪಗಂಧ ಸಸ್ಯ ಬಹಳ ಉಪಯುಕ್ತವಾಗಿದೆ. ಮನೆಯಂಗಳದಲ್ಲಿ ಅಥವಾ ಮನೆ ಬಾಗಿಲಿನ ಬಳಿ ಸರ್ಪಗಂಧ ಗಿಡವನ್ನು ನೆಡುವುದರಿಂದ ಹಾವುಗಳು ಮನೆ ಬಳಿ ಸುಳಿಯದಂತೆ ತಡೆಯಬಹುದು. ಈ ಸಸ್ಯದಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿದ್ದು, ಮೆಣಸು ಅಥವಾ ಹಸಿರು ಮೆಣಸಿನಕಾಯಿ ತರಹದ ತೀಕ್ಷ್ಣ ವಾಸನೆಯನ್ನು ಹೊರಸೂಸುತ್ತದೆ. ಈ ವಾಸನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತಿದ್ದು, ಹಾವುಗಳಿಗೆ ಇದು ಅಸಹ್ಯವಾಗುತ್ತದೆ. ಆದ್ದರಿಂದ ಹಾವುಗಳು ಈ ಗಿಡ ಇರುವ ಪ್ರದೇಶದತ್ತ ಬರಲು ಹಿಂಜರಿಯುತ್ತವೆ.
ಹಾವುಗಳಿಗೆ ಮಾತ್ರವಲ್ಲದೆ, ಇತರೆ ಸರೀಸೃಪಗಳಿಗೂ ಸರ್ಪಗಂಧ ಸಸ್ಯ ಶತ್ರುವಾಗಿದೆ. ಹೀಗಾಗಿ ಮನೆ ಸುತ್ತಮುತ್ತ ಈ ಗಿಡವನ್ನು ನೆಡುವುದರಿಂದ ಹಾವುಗಳ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. ಇದಲ್ಲದೆ, ಸರ್ಪಗಂಧ ಸಸ್ಯದ ಬೇರುಗಳನ್ನು ಮನೆ ಬಾಗಿಲು, ಕಿಟಕಿ ಅಥವಾ ಪ್ರವೇಶ ದ್ವಾರಗಳ ಬಳಿ ಇಟ್ಟರೆ, ಹಾವುಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಬೇರುಗಳಿಂದ ಹೊರಬರುವ ಬಲವಾದ ವಾಸನೆ ಹಾವುಗಳನ್ನು ದೂರ ಇಡುತ್ತದೆ.
ಸರ್ಪಗಂಧ ಸಸ್ಯದ ಬೀಜಗಳಲ್ಲೂ ಹಾವುಗಳನ್ನು ಓಡಿಸುವ ಶಕ್ತಿ ಇದೆ. ಈ ಬೀಜಗಳಲ್ಲಿ ಆಲ್ಕಲಾಯ್ಡ್ಗಳು, ರೆಸರ್ಪೈನ್, ಸರ್ಪೆಂಟೈನ್ ಹಾಗೂ ಅಜ್ಮಲೈಸಿನ್ನಂತಹ ಔಷಧೀಯ ಅಂಶಗಳಿದ್ದು, ಇವುಗಳ ತೀಕ್ಷ್ಣ ವಾಸನೆ ಹಾವುಗಳು ಆ ಪ್ರದೇಶಕ್ಕೆ ಬಾರದಂತೆ ಮಾಡುತ್ತದೆ.
ಸರ್ಪಗಂಧ ಸಸ್ಯದ ಜೊತೆಗೆ, ಚೆಂಡುಹೂವು, ತುಳಸಿ ಮತ್ತು ಲೆಮನ್ ಗ್ರಾಸ್ ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದಲೂ ಹಾವುಗಳ ಕಾಟವನ್ನು ನಿಯಂತ್ರಿಸಬಹುದು. ಇವುಗಳ ವಾಸನೆ ಕೂಡ ಹಾವುಗಳಿಗೆ ಇಷ್ಟವಿರದ ಕಾರಣ, ನೈಸರ್ಗಿಕವಾಗಿ ಮನೆಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತವೆ.



