ಬೆಂಗಳೂರು: ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಅನೀಶ್ “ಜೀವನದ ಭಾಷೆ” ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಇದಕ್ಕೂ ಮುನ್ನ “ಭರವಸೆಯ ಜೀವನ” ಎಂಬ ಶಾರ್ಟ್ ಮೂವಿ ನಿರ್ಮಿಸಿದ್ದರು. ಕೆಲವು ಕಾರಣಗಳಿಂದ ಸಿನಿಮಾ ನಿಲ್ಲಿಸಿ ಬಳಿಕ ಮುಂಬೈಗೆ ಸ್ಥಳಾಂತರವಾಗಿದ್ದರು.
ಈ ನಡುವೆ, ತಮ್ಮ ಕಾರು ಮಾರಾಟದ ಬಗ್ಗೆ ನಟಿ ಐಶ್ವರ್ಯ ಅವರಿಗೆ ಮಾಹಿತಿ ನೀಡಿದ್ದರು. ದುನಿಯಾ ವಿಜಯ್ ಅಭಿನಯದ “ಭೀಮ” ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯ ಮೂಲಕ ಆರೋಪಿಗಳು ಮಾಹಿತಿ ಕಲೆಹಾಕಿದ್ದಾರೆ. ಕಾರು ಖರೀದಿ ಮಾಡುವುದಾಗಿ ಹೇಳಿ ಅನೀಶ್ ಅವರನ್ನು ಸಂಪರ್ಕಿಸಿ, ನಟಿಯ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.
ಬೆಂಗಳೂರಿಗೆ ಬಂದ ಬಳಿಕ ಕಾರು ಖರೀದಿ ನೆಪದಲ್ಲಿ ಅನೀಶ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಿರ್ದೇಶಕನೊಂದಿಗೆ ಐದು ಲಕ್ಷ ರೂಪಾಯಿ ಹಣದ ವಿಚಾರವಾಗಿ ಉಂಟಾದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ 11 ಆರೋಪಿಗಳನ್ನು ಬಂಧಿಸಿರುವ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



