ದೇವನಹಳ್ಳಿ: ಮೂರು ಗಂಟೆಗಳಲ್ಲಿ ಮುಗಿಯಬೇಕಿದ್ದ ಬೆಂಗಳೂರು–ಕಠ್ಮಂಡು ವಿಮಾನ ಪ್ರಯಾಣ ಮೂರು ದಿನಗಳ ನರಕಯಾತ್ರೆಯಾಗಿ ಪರಿಣಮಿಸಿದ್ದ ಘಟನೆಗೆ ಕೊನೆಗೂ ತೆರೆ ಬಿದ್ದಿದೆ.
ಸೂಕ್ತ ಮಾಹಿತಿ ನೀಡದೇ, ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಅಲೆದಾಡಿಸಿದ ಬಳಿಕ, 180ಕ್ಕೂ ಹೆಚ್ಚು ಪ್ರಯಾಣಿಕರು ಮೂರು ದಿನಗಳ ನಂತರ ಸುರಕ್ಷಿತವಾಗಿ ನೇಪಾಳದ ಕಠ್ಮಂಡುವಿಗೆ ತಲುಪಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರು–ಕಠ್ಮಂಡು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದವರು ವಿಮಾನ ಲ್ಯಾಂಡ್ ಆಗದೇ ವಾಪಸ್ ಬರುತ್ತಿರುವುದು, ವಾರಣಾಸಿ ಹಾಗೂ ಲಕ್ನೋ ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಕಳೆದ ಎರಡು ದಿನಗಳಿಂದ ಊಟ, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೇ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದರು.
ಪ್ರಯಾಣಿಕರ ಪರದಾಟದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ವಿಮಾನ ಸಂಸ್ಥೆ ಎಚ್ಚೆತ್ತುಕೊಂಡಿದೆ. ಗುರುವಾರ ಬೆಳಗ್ಗೆ 10.30ಕ್ಕೆ 180 ಪ್ರಯಾಣಿಕರನ್ನು ಹೊತ್ತ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಗೂ ಕಠ್ಮಂಡುನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಈ ಹಿಂದೆ ಎರಡು ದಿನಗಳ ಕಾಲ ಕಠ್ಮಂಡುವಿನಲ್ಲಿ ಲ್ಯಾಂಡ್ ಆಗದೇ ಸಂಸ್ಥೆಯ ಎರಡು ವಿಮಾನಗಳು ವಾಪಸ್ ಬಂದಿದ್ದರಿಂದ ಕೆಲ ಪ್ರಯಾಣಿಕರು ತಮ್ಮ ಪ್ರವಾಸವನ್ನೇ ರದ್ದು ಮಾಡಿಕೊಂಡಿದ್ದರು. ಆದರೆ ನೇಪಾಳಕ್ಕೆ ತೆರಳಲೇಬೇಕೆಂದು ಕಾದು ಕುಳಿತಿದ್ದ 180 ಜನರನ್ನು ಒಂದೇ ವಿಮಾನದಲ್ಲಿ ಇಂದು ರವಾನಿಸಲಾಯಿತು. ಲ್ಯಾಂಡಿಂಗ್ ವೇಳೆ ಈ ವಿಮಾನವೂ ಕೆಲಕಾಲ ಕಠ್ಮಂಡು ಆಕಾಶದಲ್ಲಿ ಸುತ್ತಾಡಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ಕೊನೆಗೂ ಸುರಕ್ಷಿತ ಲ್ಯಾಂಡಿಂಗ್ ನಡೆದಿದ್ದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟಾರೆ, ಮೂರು ಗಂಟೆಗಳ ಪ್ರಯಾಣ ಮೂರು ದಿನಗಳ ಕಾಲ ಕಠ್ಮಂಡು ಹೋಗಿದ್ದು ಏಕೆ ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೇ ಉಳಿದಿದೆ. ಸಮಯಕ್ಕೆ ಸರಿಯಾಗಿ ಗುರಿ ತಲುಪುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಹೊರಟಿದ್ದ ಪ್ರಯಾಣಿಕರು, ಹೆಚ್ಚುವರಿ ಹಣ ಹಾಗೂ ಮಾನಸಿಕ ಒತ್ತಡ ಅನುಭವಿಸಿದ್ದಾರೆ.



