ಪುದುಚೇರಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆ ಜೋರಾಗಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡಿ ₹2,700 ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಮತ್ತು ಡಿಎಂಕೆ ಆಡಳಿತದ ಅವಧಿಯಲ್ಲಿ ಪುದುಚೇರಿಯ ಜನರು ಭ್ರಷ್ಟಾಚಾರ, ಅಪರಾಧ ಮತ್ತು ಯಾತನೆ ಅನುಭವಿಸಿದರು. ಗೂಂಡಾಗಳು ಮತ್ತು ಮಾದಕವಸ್ತು ಮಾಫಿಯಾಗಳು ಬೀದಿಗಳನ್ನು ಆಳುತ್ತಿದ್ದವು,” ಎಂದು ಆರೋಪಿಸಿದರು.
“ಕಾಂಗ್ರೆಸ್ ಪುದುಚೇರಿಯನ್ನು ದೆಹಲಿಯ ಒಂದು ಕುಟುಂಬಕ್ಕೆ ಎಟಿಎಂ ಆಗಿ ಪರಿವರ್ತಿಸಿತು. ಡಿಎಂಕೆ ಹಗರಣಗಳ ಸುದೀರ್ಘ ಪಟ್ಟಿ ಹೊಂದಿದೆ. ಈ ಎರಡೂ ಪಕ್ಷಗಳು ಪುದುಚೇರಿಯ ಅಭಿವೃದ್ಧಿಗೆ ಅಡ್ಡಿಯಾಗಿವೆ,” ಎಂದು ಹೇಳಿದರು.
ಪುದುಚೇರಿ ಮತ್ತೆ ಭ್ರಷ್ಟಾಚಾರ ಮತ್ತು ಅಪರಾಧದ ಯುಗಕ್ಕೆ ಮರಳಬೇಕೇ? ಜನರು ಅದನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು. 2047ರೊಳಗೆ ಭಾರತ ಮತ್ತು ಪುದುಚೇರಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ ಎಂದರು.
ಕೇಂದ್ರವು ನಗರ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಪ್ರವಾಸೋದ್ಯಮ ಪುದುಚೇರಿಯ ಶಕ್ತಿ ಎಂದು ಬಣ್ಣಿಸಿದ ಪ್ರಧಾನಿ, ಆಧ್ಯಾತ್ಮಿಕ, ಪರಿಸರ ಹಾಗೂ ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.



