



ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಾಮಾನ್ಯವಾಗಿ ಚಳಿಗಾಲದಲ್ಲಿ ಬೇವಿನಮರದಲ್ಲಿ ಬಿಳಿ ರೂಪದ ದ್ರವ ಸುರಿಯುತ್ತದೆ. ಇದು ಇಂದು-ನಿನ್ನೆಯದಲ್ಲ, ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಸ್ಥರಿಗೆ ಇದೊಂದು ಪವಾಡದಂತೆ ಭಾಸವಾಗಿದೆ.
ಬಿಜಕಲ್ನ ಗೋಪಾಲರಾವ್ ಎಂಬುವವರ ಹೊಲದಲ್ಲಿ ಬೇವಿನಮರದಿಂದ ಬಿಳಿ ದ್ರವ ಸ್ರವಿಸುತ್ತಿದೆ. ಇದನ್ನು ಕಂಡವರು, ಬೇವಿನಮರದ ಬುಡದಲ್ಲಿ ಗದ್ದೆಮ್ಮ ದೇವಿ ಮೂರ್ತಿ ಇದೆ. ಮರದಿಂದ ಬಿಳಿ ದ್ರವ ಸ್ರವಿಸುತ್ತಿರುವುದು ದೇವಿಯ ಪವಾಡ ಎಂದು ಹೇಳುತ್ತಿದ್ದಂತೆ, ಜನಸಾಗರ ಸೇರಿದೆ. ಕೊನೆಗೆ ಮರದ ಬಳಿ ಟೆಂಟ್ ಹಾಕಿ ಪೂಜೆ-ಪುನಸ್ಕಾರ ಪ್ರಕ್ರಿಯೆಗಳು ಭರ್ಜರಿಯಾಗಿ ನಡೆಯುತ್ತಿವೆ. ಇದನ್ನ ಕಣ್ತುಂಬಿಕೊಳ್ಳಲು ಜನ ಟಂಟಂ, ಆಟೋ, ಟ್ರ್ಕಾಕ್ಟರ್ ಸಮೇತ ತಂಡೋಪತಂಡವಾಗಿ ಆಗಮಿಸಿ, ಧನ್ಯತಾ ಭಾವ ಪ್ರದರ್ಶಿಸುತ್ತಿದ್ದಾರೆ.
ವಾಸ್ತವವಾಗಿ ಚಳಿಗಾಲದಲ್ಲಿ ಬೇವಿನ ಮರದಿಂದ ಬಿಳಿದ್ರವ ಸುರಿಯುವುದಕ್ಕೆ ವೈಜ್ಞಾನಿಕ ಕಾರಣಗಳಿವೆಯೇ ಹೊರತು ದೈವದ ಕಾರಣಗಳಲ್ಲ ಎಂದು ತಜ್ಞರು ಹೇಳುತ್ತಾರೆ.

