ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ:
ಜಿಲ್ಲೆಯ ಹಿರಿಯೂರು ಬಳಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು 10 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಹಿರಿಯೂರು ತಾಲೂಕಿನ ಹಾಲೂರು ಸಮೀಪ ನಡೆದಿದೆ.
ಮೃತರೆಲ್ಲರೂ ಗದಗ ತಾಲೂಕಿನ ಹುಯಿಲಗೋಳ ಗ್ರಾಮದವರು ಎನ್ನಲಾಗಿದೆ. ಹನುಮಂತಪ್ಪ(30), ಪ್ರಶಾಂತ್ ಹಟ್ಟಿ(29) ಗುರಪ್ಪ ಅಲಿಯಾಸ್ ಗುರುಮೂರ್ತಿ ಹೂಗಾರ್ (29) ಹಾಗೂ ರಮೇಶ್ ಅಲಿಯಾಸ್ ರಾಮನಗೌಡ (30) ಮೃತ ದುರ್ದೈವಿಗಳಾಗಿದ್ದಾರೆ.
ಬೆಂಗಳೂರಿಗೆ ಈರುಳ್ಳಿ ತುಂಬಿಕೊಂಡು ಹೊರಟಿದ್ದ ಲಾರಿ ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತವಾಗಿತ್ತು. ಅಪಘಾತವಾಗಿದ್ದ ಲಾರಿಗೆ ಹಿಂಬದಿಯಿಂದ 3 ಈಚರ್, 3 ಲಾರಿ, 1 ಕಾರ್ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ 4 ಮಂದಿ ಸಾವನ್ನಪ್ಪಿ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮೃತರು ಹುಯಿಲಗೋಳ ಗ್ರಾಮದಿಂದ ಒಟ್ಟು 6 ಮಂದಿ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ಯಮಕಿಂಕರ ತನ್ನ ಅಟ್ಟಹಾಸ ಮೆರೆದಿದ್ದಾನೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.