ವಿಜಯನಗರ: ಒಮ್ಮೆ ಲಾಭದಾಯಕ ಬೆಳೆ ಎಂದೇ ಗುರುತಿಸಿಕೊಂಡಿದ್ದ ಟೊಮ್ಯಾಟೋ ಈಗ ರೈತರಿಗೆ ಭಾರವಾದ ನಷ್ಟದ ಸಂಕೇತವಾಗಿ ಪರಿಣಮಿಸಿದೆ. ವಿಜಯನಗರ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ಏಕಾಏಕಿ ಕುಸಿದು, ರೈತರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ.
1000 ರಿಂದ 1200 ರೂ.ವರೆಗೆ ಮಾರಾಟವಾಗುತ್ತಿದ್ದ ಒಂದು ಬಾಕ್ಸ್ ಟೊಮ್ಯಾಟೋ ದರ ಈಗ ಕೇವಲ 80–100 ರೂ.ಗೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸಂಪೂರ್ಣವಾಗಿ ಧ್ವಂಸಗೊಂಡಂತಾಗಿದೆ. 20 ರೂ.ಗೆ 2ರಿಂದ 4 ಕೆಜಿ ಟೊಮ್ಯಾಟೋ ಮಾರಾಟವಾಗುತ್ತಿರುವ ದೃಶ್ಯಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ.
ಸಾಲ ಮಾಡಿ ಬೆಳೆದ ರೈತರು ಇದೀಗ ಹೂಡಿಕೆ ಸಹ ವಾಪಸು ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾದ ರೈತರ ಪರಿಸ್ಥಿತಿ ಕರುಣಾಜನಕವಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಇರಾನ್–ಇಸ್ರೇಲ್ ಸಂಘರ್ಷದಿಂದ ರಫ್ತು ಕುಂಠಿತಗೊಂಡಿದ್ದು, ದೇಶೀಯವಾಗಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಕುಸಿತಗೊಂಡಿರುವುದು ಬೇಡಿಕೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಇದರ ನೇರ ಪರಿಣಾಮವಾಗಿ ಟೊಮ್ಯಾಟೋ ಮಾರುಕಟ್ಟೆ ಸಂಪೂರ್ಣ ಕುಸಿತ ಕಂಡಿದೆ.



